ತುಮಕೂರು: ಜಿಲ್ಲೆಯ ಕುಣಿಗಲ್ ಆಲಪ್ಪನ ಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ವಿಭಜಕದಲ್ಲಿ ₹ 100, 500 ಮುಖ ಬೆಲೆಯ ಕಂತೆ ಕಂತೆ ನೋಟುಗಳನ್ನು ಬಾಚಿಕೊಂಡು ಪ್ಲಾಸ್ಟಿಕ್ ಚೀಲಕ್ಕೆ ತುಂಬುತ್ತಿರುವ ವಿಡಿಯೊ ವೈರಲ್ ಆಗಿದೆ.
ಮಧ್ಯಾಹ್ನ 1.30 ಹೊತ್ತಿಗೆ ಟಾ ಟಾ ಏಸ್ ವಾಹನ ಹೆದ್ದಾರಿಯಲ್ಲಿ ಹೊರಟಿದ್ದಾಗ ಅದರೊಳಗಿಂದ ಹಣ ಬಿದ್ದಿತೆನ್ನಲಾಗಿದೆ. ಚಾಲಕ ಮತ್ತಿಬ್ಬರು ಓಡಿ ಬಂದು ಆ ಹಣವನ್ನು ಗೂಡಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಕೊಂಡು ಹೋದರೆನ್ನಲಾಗಿದೆ.
‘ಹಣ ತುಂಬುತ್ತಿರುವ ವಿಡಿಯೊ ಲಭ್ಯವಾಗಿದ್ದು ಅದನ್ನು ವೀಕ್ಷಿಸಲಾಗಿದೆ. ವಾಹನದ ಸಂಖ್ಯೆಯೂ ಲಭ್ಯವಾಗಿದೆ. ಅದರಲ್ಲಿ ಎಷ್ಟು ಹಣ ಎತ್ತು, ಎಷ್ಟು ಹಣ ತೆಗೆದುಕೊಂಡು ಹೋಗುತ್ತಿದ್ದರು ಎಂಬುದು ಗೊತ್ತಿಲ್ಲ. ರಸ್ತೆ ವಿಭಜಕದಲ್ಲಿ ಕುಳಿತು ಬ್ಯಾಗಿಗೆ ಹಣ ತುಂಬುವ ವಿಡಿಯೊ ಇದೆಯಷ್ಟೇ’ ಎಂದು ಕುಣಿಗಲ್ ಚುನಾವಣಾಧಿಕಾರಿ ಜಯಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎರಡನ್ನೂ ಪರಿಶೀಲಿಸಿ ತನಿಖೆ ನಡೆಸಿ ವರದಿ ಕೊಡಲು ಕುಣಿಗಲ್ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.
ಚುನಾವಣಾಧಿಕಾರಿ ಸೂಚನೆ ಮೇರೆಗೆ ಕುಣಿಗಲ್ ಠಾಣೆ ಸಬ್ ಇನ್ ಸ್ಪೆಕ್ಟರ್ ಪುಟ್ಟೇಗೌಡ, ಅಮೃತೂರು ಠಾಣೆ ಸಬ್ ಇನ್ ಸ್ಪೆಕ್ಟರ್ ಅನಿಲ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.