ತುಮಕೂರು: ಜಿಲ್ಲೆಗೆ ಹೇಮಾವತಿ ನೀರು ನೀಡುವುದನ್ನು ತಡೆಯಲು ಪಕ್ಕದ ಜಿಲ್ಲೆಯ ಬಲಿಷ್ಠ ರಾಜಕಾರಣಿಗಳು ಪಿತೂರಿ ಮಾಡುತ್ತಿದ್ದಾರೆ. ನಮ್ಮ ಪಾಲಿನ ನೀರು ಪಡೆಯಲು ಹೋರಾಟ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆಪಾದಿಸಿದರು.
ತಾಲ್ಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಭಾನುವಾರ ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಹೊನ್ನುಡಿಕೆ ಕೆರೆಯಿಂದ 27 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಯಾವುದೇ ಇರಲಿ, ಅಭಿವೃದ್ಧಿ ಮತ್ತು ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಅಭಿವೃದ್ಧಿ ಯೋಜನೆಗಳಿಗೆ ತಕರಾರು ತೆಗೆಯುವವರು ಹೆಚ್ಚುತ್ತಿದ್ದಾರೆ. ರಾಜಕೀಯದಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುತ್ತಿವೆ. ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಎಲ್ಲ ಕ್ರಮಕೈಗೊಂಡಿದ್ದರೂ ಕೆಲವು ರಾಜಕಾರಣಿಗಳು ಇಲ್ಲದ ಆರೋಪ ಮಾಡುತ್ತಿದ್ದಾರೆ. ನೇತ್ರಾವತಿ ನದಿಗೂ ಎತ್ತಿನ ಹೊಳೆ ಯೋಜನೆಗೂ ಸಂಬಂಧವಿಲ್ಲ. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಹಳ್ಳಗಳಿಂದ ಎತ್ತಿನಹೊಳೆ ಯೋಜನೆಗೆ ಬಳಕೆ ಮಾಡಲಾಗುವುದು. ಕೇಂದ್ರ ಪರಿಸರ ಇಲಾಖೆ ಯೋಜನೆಗೆ ಅನುಮತಿ ನೀಡಿದೆ. ಇದರಿಂದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ರಾಜ್ಯದ 126 ತಾಲ್ಲೂಕುಗಳಲ್ಲಿ ಬರದ ಸ್ಥಿತಿ ಇದೆ. ಮಳೆ ಬಾರದಿದ್ದರೆ ಕುಡಿಯುವ ನೀರು ನೀಡುವುದೂ ಕಷ್ಟ. ಸರ್ಕಾರ ಎಷ್ಟೇ ಹಣ ನೀಡಿದರೂ ಸಮರ್ಪಕ ನೀರು ನೀಡುವುದು ಕಷ್ಟ. ಜನತೆ ಇಂತಹ ಸಂದರ್ಭದಲ್ಲಿ ವಿವೇಚನೆಯಿಂದ ವರ್ತಿಸಬೇಕು. ಅಂತರ್ಜಲದ ಮಟ್ಟ ಕುಸಿದಿದ್ದು, ನೀರು ಬಳಕೆ ತಗ್ಗಿಸಬೇಕು ಎಂದು ಸಲಹೆ ಮಾಡಿದರು.
ಶಾಸಕ ಬಿ.ಸುರೇಶ್ಗೌಡ ಪ್ರಾಸ್ತಾವಿಕ ಮಾತನಾಡಿ, ಅಂತರ್ಜಲ ಶುದ್ಧವಿಲ್ಲ ಎಂಬ ಕಾರಣಕ್ಕೆ ಹೇಮಾವತಿ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಸನ ಮತ್ತು ಮಂಡ್ಯದ ಜನ ಕಾವೇರಿ ನೀರು ಕುಡಿಯುವುದರಿಂದ ಅವರನ್ನು ಬಗ್ಗಿಸಲು ಸಾಧ್ಯವಾಗುವುದಿಲ್ಲ. ನೀವು ಸಹ ಹೇಮಾವತಿ ನೀರು ಕುಡಿದು ನನ್ನ ವಿರುದ್ಧವೇ ತೊಡೆ ತಟ್ಟುವಂತಾಗಬೇಡಿ ಎಂದು ಮಾರ್ಮಿಕವಾಗಿ ಹೇಳಿದರು.
ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣಪ್ಪ, ಎಂಜಿನಿಯರ್ ಶಿವಕುಮಾರ್, ತಹಶೀಲ್ದಾರ್ ಮಾರುತಿ ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ್, ಮುಖಂಡರಾದ ದಕ್ಷಿಣಾಮೂರ್ತಿ, ನೀಲಕಂಠಪ್ಪ, ಗಂಗಾಧರ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.