ADVERTISEMENT

ರಾಮಮಂದಿರ ನವ ಭಾರತದ ಸಂಕೇತವಾಗಲಿ

ರಾಮಕೃಷ್ಣ ಸೇವಾಶ್ರಮ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 5:04 IST
Last Updated 7 ಆಗಸ್ಟ್ 2020, 5:04 IST
ಮಧುಗಿರಿ ಪಟ್ಟಣದಲ್ಲಿ ಪಾವಗಡದ ರಾಮಕೃಷ್ಣ ಸೇವಾಶ್ರಮದಿಂದ ತಾಲ್ಲೂಕಿನ ಅಕ್ಷರ ದಾಸೋಹ ಸಿಬ್ಬಂದಿಗೆ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದರು
ಮಧುಗಿರಿ ಪಟ್ಟಣದಲ್ಲಿ ಪಾವಗಡದ ರಾಮಕೃಷ್ಣ ಸೇವಾಶ್ರಮದಿಂದ ತಾಲ್ಲೂಕಿನ ಅಕ್ಷರ ದಾಸೋಹ ಸಿಬ್ಬಂದಿಗೆ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿದರು   

ಮಧುಗಿರಿ: ರಾಮಮಂದಿರ ನಿರ್ಮಾಣದಲ್ಲಿ ಇಡುವ ಒಂದೊಂದು ಇಟ್ಟಿಗೆಯೂ ನವಭಾರತ ನಿರ್ಮಾಣದ ಸಂಕೇತವಾಗಬೇಕು ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮ ಸಂಸ್ಥೆಯ ಮುಖ್ಯಸ್ಥ ಸ್ವಾಮಿ ಜಪಾನಂದಜಿ ತಿಳಿಸಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಪಾವಗಡದ ರಾಮಕೃಷ್ಣ ಸೇವಾಶ್ರಮ, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಇನ್ಫೊಸಿಸ್ ಫೌಂಡೇಷನ್ ಹಾಗೂ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ತಾಲ್ಲೂಕಿನ ಅಕ್ಷರ ದಾಸೋಹ ವಿಭಾಗದ 712 ಅಡುಗೆ ಸಿಬ್ಬಂದಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು.

ಜಪಾನ್, ದಕ್ಷಿಣ ಕೊರಿಯಾ ಹಾಗೂ ಇಸ್ರೇಲ್‍ನಂತಹ ದೇಶಗಳಲ್ಲಿ ಕೊರೊನಾ ಸೋಂಕು ಅಷ್ಟಾಗಿ ಹರಡಲಿಲ್ಲ. ಏಕೆಂದರೆ ಅಲ್ಲಿ ಜನರು ಶಿಸ್ತನ್ನು ಪಾಲಿಸುತ್ತಾರೆ. ಆದರೆ, ನಾವುಗಳು ಸರ್ಕಾರವನ್ನು ದೂಷಿಸುತ್ತಾ ಕಾಲಹರಣ ಮಾಡುತ್ತಿದ್ದೇವೆ. ಶಾಲೆಯ ಮಕ್ಕಳಿಗೆ ರುಚಿಯಾದ ಅಡುಗೆ ತಯಾರಿಸಿ ಕೊಡುತ್ತಿದ್ದ ಸಿಬ್ಬಂದಿಗೂ ಕೊರೊನಾ ಸಂಕಷ್ಟ ತಂದಿದೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ಮಾತನಾಡಿ, ಸಂಕಷ್ಟದಲ್ಲಿ ಸಹಾಯ ಮಾಡುವ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಅಂತಹ ಗುಣ ಹೊಂದಿರುವ ಸ್ವಾಮಿ ಜಪಾನಂದಜಿ ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.

ಡಿವೈಎಸ್‌ಪಿ ಎಂ.ಪ್ರವೀಣ್, ಡಿಡಿಪಿಐ ರೇವಣ್ಣ ಸಿದ್ದಪ್ಪ ಮಾತನಾಡಿದರು. ಬಿಇಒ ರಂಗಪ್ಪ, ವಕೀಲರಾದ ನಿರಂಜನ್, ವಿ.ಮಂಜುನಾಥ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪದ್ಮಾವತಮ್ಮ, ರಕ್ತದಾನಿ ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.