ತುಮಕೂರು: ಶೇ 100ರಷ್ಟು ಮತದಾನ ನಡೆಯಲು ಪ್ರೇರಕರು ಮತದಾರನ ಬಳಿಗೆ ಹೋಗಿ ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಅನಿಸ್ ಕಣ್ಮಣಿ ಜಾಯ್ ಸಲಹೆ ನೀಡಿದರು.
ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ ಪ್ರೇರಕರಿಗೆ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರೇರಕರು ಮಹಿಳೆಯರೇ ಆಗಿದ್ದಾರೆ. ಪ್ರತಿ ಮತದಾರರ ಕುಟುಂಬಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅರಿವು ಮೂಡಿಸಬೇಕು. ಮತದಾನ ಸಾಕ್ಷರತೆಯಲ್ಲಿ ಪ್ರಗತಿ ಸಾಧಿಸುವುದು ಪ್ರೇರಕರ ಗುರಿಯಾಗಿದೆ ಎಂದು ಹೇಳಿದರು. ಮಹಿಳೆ ಸಮಾಜದ ಪ್ರೇರಕ ಶಕ್ತಿ. ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಹೇಳಿದರು.
ಸ್ವೀಪ್ ಸಂಪನ್ಮೂಲ ವ್ಯಕ್ತಿ ರಿಜ್ವಾನ್ ಬಾಷಾ ಸಾಬ್, ಮತದಾನದ ಕರ್ತವ್ಯದ ಬಗ್ಗೆ ಪ್ರೇರಕರಿಗೆ ಉಪನ್ಯಾಸ ನೀಡಿದರು. ರಮೇಶ್ ಮತ್ತು ಚನ್ನಬಸಪ್ಪ ಅವರು ಮತದಾನ ಪ್ರಾತ್ಯಕ್ಷಿಕೆ ನೀಡಿದರು.
ಸಮಿತಿ ಕಾರ್ಯದರ್ಶಿಗಳಾದ ಜಿಲ್ಲಾ ಅಂಬೇಡ್ಕರ್ ನಿಗಮದ ಉಪನಿರ್ದೇಶಕ ನಾಗೇಶ್ರಾವ್, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜಶೇಖರ್, ಸಮಿತಿ ಸದಸ್ಯರಾದ ಶ್ರೀನಿವಾಸ್, ಕಾರ್ಯಕ್ರಮ ಸಹಾಯಕ, ಕೆ.ಸಿದ್ದರಾಮಯ್ಯ ಅಧೀಕ್ಷಕರಾದ ಅಜಯ್ ಕುಮಾರ್ ಹಾಜರಿದ್ದರು.
ನಗರದ ಟೌನ್ಹಾಲ್ ವೃತ್ತದಲ್ಲಿ ಅನೀಸ್ ಕಣ್ಮಣಿ ಜಾಯ್ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಂದ ಬಂದಿದ್ದ ಪ್ರೇರಕರು ಹಾಗೂ ಸ್ವಯಂಸೇವಕರು, ಬಿ.ಎಚ್ ರಸ್ತೆ, ಎಂ.ಜಿ ರಸ್ತೆ, ವಿವೇಕಾನಂದ ರಸ್ತೆಯ ಮೂಲಕ ಗುಬ್ಬಿ ವೀರಣ್ಣ ಕಲಾಕ್ಷೇತ್ರ ತಲುಪಿದರು.
ಗ್ರಾಮಾಂತರಕ್ಕೆ ಬಿಪಿನ್ ಮಂಜೀ ವೀಕ್ಷಕ
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಬಿಪಿನ್ ಮಂಜೀ ಅವರು ನೇಮಕವಾಗಿದ್ದಾರೆ. ನಗರದ ಎಸ್ಐಟಿ ಕೆನಡಿ ಗೆಸ್ಟ್ಹೌಸ್ನಲ್ಲಿ ತಂಗಿರುತ್ತಾರೆ.ಸಾರ್ವಜನಿಕರು ಅವರ ಮೊಬೈಲ್ 9425562042 ಸಂಪರ್ಕಿಸಿ ಚುನಾವಣಾ ವಿಷಯಗಳ ಕುರಿತು ಮಾಹಿತಿ ನೀಡಬಹುದು. ಪ್ರತಿನಿತ್ಯ 11ರಿಂದ ಮಧ್ಯಾಹ್ನ 1ರವರೆಗೆ ಖುದ್ದು ಭೇಟಿ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.