ತುಮಕೂರು: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ರಾಜ್ಯ ಸರ್ಕಾರಿ ವೈದ್ಯರ ಸಂಘದಿಂದ ಮಧುಮೇಹ ಉಚಿತ ತಪಾಸಣೆ ಮಾಡಲಾಯಿತು.
30 ವರ್ಷ ಮೇಲ್ಪಟ್ಟ 850 ಮಂದಿ ತಪಾಸಣೆಗೆ ಒಳಗಾಗಿದ್ದು, ಅವರಲ್ಲಿ 150 ಮಂದಿಗೆ ಮಧುಮೇಹ ಇರುವುದು ಪತ್ತೆಯಾಗಿದೆ.
ನಗರದ ವಿಶ್ವವಿದ್ಯಾಲಯ ಮುಂಭಾಗ ಮಧುಮೇಹ ತಪಾಸಣೆ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ‘ಮಧುಮೇಹ ಸಾರ್ವತ್ರಿಕ ರೋಗವಾಗಿದೆ. ಬದಲಾದ ಜೀವನಶೈಲಿಯಿಂದ ಮಧುಮೇಹ ಹೆಚ್ಚುತ್ತಿದೆ. ನಿಯಮಿತವಾಗಿ ವೈದ್ಯರ ಬಳಿ ತಪಾಸಣೆಗೆ ಒಳಪಡುವುದರ ಮೂಲಕ ಇದರಿಂದ ಬರುವ ಹೃದಯ ಸಂಬಂಧಿತ ಸಮಸ್ಯೆಯನ್ನು ತಡೆಯಬಹುದು’ ಎಂದರು.
ಅನಿಯಮಿಯ ಮಧುಮೇಹದಿಂದ ಬಳಲುತ್ತಿರುವವರು ಕೋವಿಡ್ 19ನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಧುಮೇಹ ನಿಯಂತ್ರಿಸುವುದು ಅವಶ್ಯವಾಗಿದೆ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀನಾಥ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಡಾ.ರಾಜಶೇಖರಯ್ಯ ಮಾತನಾಡಿದರು. ಶಾಸಕ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಹಲವರು ತಪಾಸಣೆಗೆ ಒಳಗಾದರು. ಡಾ.ಮೋಹನ್, ಡಾ.ಮಹೇಶ್, ಡಾ.ನಾಗರಾಜ ಪಾಟೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.