ADVERTISEMENT

ಇಂದು ಕಾಂಗ್ರೆಸ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 6:03 IST
Last Updated 6 ಜನವರಿ 2018, 6:03 IST

ಚಿಕ್ಕನಾಯಕನಹಳ್ಳಿ: ಸರ್ಕಾರದ ಸಾಧನೆಗಳನ್ನು ಬಿಂಬಿಸಲು ‘ಕಾಂಗ್ರೆಸ್ ನಡಿಗೆ ಜಯದ ಕಡೆಗೆ’  ಸಮಾವೇಶವನ್ನು ಶನಿವಾರ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ  ಆಯೋಜಿಸಲಾಗಿದೆ.

ಟಿಕೆಟ್ ಆಕಾಂಕ್ಷಿಗಳ ಕಟೌಟ್, ಫ್ಲೆಕ್ಸ್‌ಗಳ ಮೂಲಕ ವರಿಷ್ಠರ  ಜತೆಗಿನ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.  ಕಳೆದ ಬಾರಿ  ಪರಾಜಿತಗೊಂಡಿದ್ದ  ಸಾಸಲು ಸತೀಶ್ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಬರುವ ವಿದ್ಯುತ್ ಕಂಬಗಳಿಗೆ ನೂರಾರು ಫ್ಲೆಕ್ಸ್ ಹಾಕಿಸಿದ್ದಾರೆ. ಕಂಬಗಳ ಇನ್ನೊಂದು ಬದಿಗೆ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಪೈಪೋಟಿಗೆ ಬಿದ್ದು, ರಾತ್ರೋರಾತ್ರಿ ಫ್ಲೆಕ್ಸ್ ಹಾಕಿಸುವ ಮೂಲಕ ತಾಲ್ಲೂಕಿನ ರಾಜಕಾರಣಕ್ಕೆ ಧುಮುಕುವ ಸೂಚನೆ ನಿಡಿದ್ದಾರೆ. ಇಬ್ಬರ ಮಧ್ಯೆ ತಾನೂ ಕಡಿಮೆಯಿಲ್ಲ ಎನ್ನುವಂತೆ ಹುಳಿಯಾರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಕೂಡ ಫ್ಲೆಕ್ಸ್‌ಗಳಲ್ಲಿ ಮುಖ ತೋರಿಸಿದ್ದಾರೆ.

ಸಮಾವೇಶದ ಸಿದ್ಧತೆ ವೀಕ್ಷಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ‘ಸ್ಥಳೀಯ ಕಾರ್ಯಕರ್ತರು ಸಮಾವೇಶಕ್ಕೆ ಜನರನ್ನು ಕರೆತರುವ ಜವಾಬ್ದಾರಿ ಹೊತ್ತಿದ್ದಾರೆ. 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ದಿನೇಶ್‌ಗುಂಡೂರಾವ್‌  ಭಾಗವಹಿಸುವರು’ ಎಂದು ತಿಳಿಸಿದರು.

ADVERTISEMENT

ನಾಡಜಾಗೃತಿ ಎಸ್.ಎಂ.ನಿಂಗರಾಜು, ಮಹಮದ್‌ ಪಾಷಾ ಹಾಜರಿದ್ದರು. ಶಾಲಾ ಕರ್ತವ್ಯಕ್ಕೆ ತೊಂದರೆ: ಕಾರ್ಯಕ್ರಮ ನಡೆಯುವ ಸರ್ಕಾರಿ ಪ್ರೌಢಶಾಲೆ ಆವರಣ ಫ್ಲೆಕ್ಸ್ ಗಳಿಂದ ತುಂಬಿ ಹೋಗಿದ್ದು, ಶಾಲಾ ಕರ್ತವ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಶಿಕ್ಷಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.