ADVERTISEMENT

ಜನರ ಆಕ್ಷೇಪ: ತಹಸೀಲ್ದಾರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:44 IST
Last Updated 10 ಜನವರಿ 2018, 5:44 IST
ಮ್ಯಾನ್ ಹೋಲ್‌ ನಿರ್ಮಾಣ ಕಾರ್ಯ ನಡೆದಿರುವುದು
ಮ್ಯಾನ್ ಹೋಲ್‌ ನಿರ್ಮಾಣ ಕಾರ್ಯ ನಡೆದಿರುವುದು   

ಕುಣಿಗಲ್: ಪಟ್ಟಣದ ಹೌಸಿಂಗ್ ಬೋರ್ಡ್‌ ಕಾಲೊನಿಗೆ ಹೊಂದಿಕೊಂಡಿರುವ ದೊಡ್ಡಕೆರೆ ಏರಿ ಮೇಲೆ ಒಳಚರಂಡಿ ಯೋಜನೆಯ ಮ್ಯಾನ್ ಹೋಲ್‌ಗಳನ್ನು ನಿರ್ಮಿಸುತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಜನಸ್ಪಂದನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.

‘ಪಟ್ಟಣದ ಇತಿಹಾಸ ಪ್ರಸಿದ್ಧವಾದ ದೊಡ್ಡಕೆರೆಗೆ ಹೇಮಾವತಿ ನೀರನ್ನು ಹರಿಸಿ, ಶುದ್ಧೀಕರಿಸಿ ನಾಗರಿಕರಿಗೆ ವಿತರಣೆ ಮಾಡಲಾಗುತ್ತಿದೆ.ಇಡೀ ದೊಡ್ಡಕೆರೆ ಪ್ರದೇಶವನ್ನು ಸಂರಕ್ಷಿತ ವಲಯವನ್ನಾಗಿ ಘೋಷಿಸಿಲಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ತಿಳಿಸಿದರು.

‘ಕೆರೆ ಪ್ರದೇಶ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದರೂ, ಒಳಚರಂಡಿ ನಿರ್ಮಾಣದ ಗುತ್ತಿಗೆ ಪಡೆದಿರುವವರು ಕೆರೆ ಏರಿ ಮೇಲೆ ಮನೆಗಳಿಲ್ಲದಿದ್ದರೂ ಮ್ಯಾನ್ ಹೋಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಸಂಗ್ರಹವಾಗುವ ಮಲೀನಯುಕ್ತ ನೀರು ಜಿನಿಗುನ ಮೂಲಕ ದೊಡ್ಡಕೆರೆ ಸೇರುತ್ತದೆ. ಮುಂದಿನ ದಿನಗಳಲ್ಲಿ ನಾಗರಿಕರಿಗೆ ಕುಡಿಯಲು ಸರಬರಾಜಾಗುತ್ತದೆ’ ಎಂದು ದೂರು ನೀಡಿದ್ದಾರೆ.

ADVERTISEMENT

‘ದೊಡ್ಡಕೆರೆ ಏರಿಮೇಲೆ ನಿರ್ಮಾಣವಾಗುತ್ತಿರುವ ಮ್ಯಾನ್ ಹೋಲ್‌ಗಳ ಬಗ್ಗೆ ಮಾಹಿತಿ ಇಲ್ಲ, ಸ್ಥಳ ಪರಿಶೀಲನೆ ಮಾಡಿ ಗಮನ ಹರಿಸುವುದಾಗಿ’ ಹೇಮಾವತಿ ನಾಲಾ ವಲಯದ ಎಂಜಿನಿಯರ್ ಶಿವರಾಜು ತಿಳಿಸಿದ್ದಾರೆ.

ಕೆರೆ ನೀರನ್ನು ಪಟ್ಟಣದ ಜನರಿಗೆ ಕುಡಿಯಲು ವಿತರಿಸಲಾಗುತ್ತಿದೆ. ಏರಿಯ ಮೇಲೆ ಒಳಚರಂಡಿ ಯೋಜನೆ ಅಡಿಯಲ್ಲಿ ಶೌಚಾಲಯದ ಗುಂಡಿಗಳನ್ನು ನಿರ್ಮಾಣ ಮಾಡುವಂತಿಲ್ಲ. ಅದರೂ ಮಾಡಲಾಗುತ್ತಿದ್ದೆಯೇ, ವಿಚಾರ ಗೊತ್ತಿಲ್ಲ ಸ್ಥಳಕ್ಕೆ ಭೇಟಿ ನೀಡಿ ಗಮನಹರಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ಪಂಕಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.