ADVERTISEMENT

ಕಡ್ಡಾಯವಾಗಿ ಮತ ಚಲಾಯಿಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 7:01 IST
Last Updated 28 ಜನವರಿ 2018, 7:01 IST

ತುಮಕೂರು: ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಇದ್ದರೂ ಕೆಲವರಿಗೆ ಅದರ ಮಹತ್ವದ ಅರಿವಿಲ್ಲದಿರುವುದು ವಿಷಾದನೀಯ ಸಂಗತಿ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಹೇಳಿದರು. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ‘ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

’ನಮ್ಮ ದೇಶವನ್ನು ರಾಜರು ಮತ್ತು ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದಾಗ ದೇಶದ ಜನರಿಗೆ ಯಾವುದೇ ಮತ ಚಲಾಯಿಸುವ ಅಧಿಕಾರವಿರಲಿಲ್ಲ. ಆದರೆ  ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ, ಸಂವಿಧಾನವನ್ನು ರಚಿಸಿ ಅದರಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಮತ ಚಲಾಯಿಸುವ ಅಧಿಕಾರವನ್ನು ನೀಡಲಾಯಿತು’ ಎಂದರು.

’ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಕೆಲವು ಸ್ಥಳೀಯ ಸಂಸ್ಥೆಗಳಿಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದರೂ ಆ ಹಕ್ಕು ಎಲ್ಲರಿಗೂ ಇರಲಿಲ್ಲ.  ಕಂದಾಯ ಕಟ್ಟುತ್ತಿದ್ದವರಿಗೆ, ಪದವಿ ಓದಿದವರಿಗೆ ಮಾತ್ರ  ನೀಡಲಾಗಿತ್ತು.  ಈಗ ದೇಶದಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಜಾರಿಯಲ್ಲಿದ್ದು, ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ADVERTISEMENT

ಅಭಿವೃದ್ಧಿಯೊಂದಿಗೆ ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ನಾಯಕನ ಆಯ್ಕೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಇದೆ. ಕಡ್ಡಾಯ ಮತ ಚಲಾಯಿಸಿದರೆ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆಗೆ ನಿಜವಾದ ಅರ್ಥ ಬರಲಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಮಾತನಾಡಿ, ‘ ಜಿಲ್ಲೆಯಲ್ಲಿ 21.84 ಲಕ್ಷ ಮತದಾರರಿದ್ದು, ಅದರಲ್ಲಿ 10.99 ಲಕ್ಷ  ಪುರುಷ, 10.85 ಲಕ್ಷ ಮಹಿಳಾ ಮತದಾರರಿದ್ದಾರೆ. 163 ಇತರೆ ಮತದಾರರಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಸ್‌ ಕಣ್ಮಣಿ ಜಾಯ್‌ ಮಾತನಾಡಿ, ‘ವಿದ್ಯಾರ್ಥಿಗಳು ಇಂದಿನಿಂದಲೇ ತಮ್ಮ ಪೋಷಕರು ಮತ್ತು ನೆರೆಹೊರೆಯವರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ನೂತನವಾಗಿ ಮತದಾರರ ಪಟ್ಟಿ ಸೇರಿರುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು. ಮತದಾನದ ಕುರಿತು ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ, ಬಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಅಂಕಿ ಅಂಶ

21.84 ಲಕ್ಷ ಜಿಲ್ಲೆಯಲ್ಲಿರುವ ಮತದಾರರ ಸಂಖ್ಯೆ

10.99 ಲಕ್ಷ ಜಿಲ್ಲೆಯ ಪುರುಷ ಮತದಾರರ ಸಂಖ್ಯೆ

10.85 ಲಕ್ಷ ಜಿಲ್ಲೆಯ ಮಹಿಳಾ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.