ತಿಪಟೂರು: ನಗರದಲ್ಲಿ ಉಪ ಕಾರಾಗೃಹ ನವೀಕರಣಗೊಂಡು ಬಹಳ ದಿನ ಕಳೆದರೂ ಪುನರಾರಂಭದ ಭಾಗ್ಯ ಕಾಣುತ್ತಿಲ್ಲ.
ನೂರು ವರ್ಷಗಳ ಇತಿಹಾಸ ಹೊಂದಿದ್ದು, ಬ್ರಿಟಿಷರ ಕಾಲದಲ್ಲೇ ನಿರ್ಮಾಣ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕಾರಾಗೃಹದಲ್ಲಿದ್ದ ಅಪರಾಧಿಗಳೇ ಕಾರಾಗೃಹಕ್ಕೆ ಬೆಂಕಿ ಹಚ್ಚಿ ದಾಂಧಲೆಮಾಡಿ ಅಧಿಕಾರಿಗಳ ಮೇಲೂ ಹಲ್ಲೆಗೆ ಮುಂದಾಗಿದ್ದರು.
ಆಗ ಎಚ್ಚೆತ್ತ ಇಲಾಖೆ, ಮೇಲ್ದರ್ಜೆಗೇರಿಸಲು ಮುಂದಾಯಿತು. ₹50 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದ್ದು, 25 ಕೈದಿಗಳನ್ನು ಕಾರಾಗೃಹದಲ್ಲಿ ಇಡಬಹುದು. ಕಾರಾಗೃಹದ ಸುತ್ತಲೂ ಎತ್ತರವಾದ ತಡೆಗೋಡೆ ನಿರ್ಮಿಸ ಲಾಗಿದ್ದು, ಅದರ ಮೇಲುಭಾಗ ರೇಸರ್ ತಂತಿಗಳನ್ನು ಅಳವಡಿಸಲಾಗಿದೆ. ಒಬ್ಬರು ಜೈಲು ಅಧೀಕ್ಷಕರು, ಇಬ್ಬರು ಹೆಡ್ಕಾನ್ಸ್ಟೆಬಲ್, ಐವರು ಕಾನ್ಸ್ಟೆಬಲ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳನ್ನು ಒಳಗೊಂಡಂತೆ 10 ಪೊಲೀಸ್ ಠಾಣೆ ವ್ಯಾಪ್ತಿಯ ಅಪರಾಧಿಗಳನ್ನು ಈ ಕಾರಾಗೃಹದಲ್ಲಿಯೇ ಇರಿಸಲಾ ಗುತ್ತಿತ್ತು. ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಇಲ್ಲಿಂದಲೇ ಆರೋಪಿಗಳನ್ನು ಕರೆದೊಯ್ಯ ಲಾಗುತ್ತಿತ್ತು. ಆದರೆ, ನವೀಕರಣದ ಉದ್ದೇಶದಿಂದ 2 ವರ್ಷಗಳಿಂದ ಆರೋಪಿಗಳನ್ನು ತುಮಕೂರಿನ ಕಾರಾಗೃಹಕ್ಕೆ ಕರೆದೊಯ್ಯಲಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಯ ಸಿಬ್ಬಂದಿಗೆ ತೊಂದರೆಯಾಗುತ್ತಿದೆ.
‘ಆರೋಪಿಗಳನ್ನು ಬಂಧಿಸಿದರೆ ಅವರನ್ನು ತುಮಕೂರಿನ ಕಾರಾಗೃಹಕ್ಕೆ ಕರೆದುಕೊಂಡು ಹೋಗಬೇಕು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅಲ್ಲಿಂದ ಇಲ್ಲಿಗೆ ಕರೆದುಕೊಂಡು ಬರಬೇಕು. ಇದರಿಂದ ಓಡಾಟವೇ ಹೆಚ್ಚಾಗುತ್ತದೆ’ ಎನ್ನುತ್ತಾರೆ ಹೆಸರು ಹೇಳ ಬಯಸದ ಕಾರಾಗೃಹ ಸಿಬ್ಬಂದಿಯೊಬ್ಬರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.