ADVERTISEMENT

ಜಿ.ಪಂ.ಗೆ ಆಮ್ ಆದ್ಮಿ ಸ್ಪರ್ಧೆ

ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:57 IST
Last Updated 10 ಫೆಬ್ರುವರಿ 2021, 16:57 IST
ತುಮಕೂರಿನಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರು ಪೋಸ್ಟರ್ ಬಿಡುಗಡೆ ಮಾಡಿದರು
ತುಮಕೂರಿನಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರು ಪೋಸ್ಟರ್ ಬಿಡುಗಡೆ ಮಾಡಿದರು   

ತುಮಕೂರು: ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲು ಸಿದ್ಧತೆ ನಡೆಸಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ್ ಶರ್ಮಾ ಇಲ್ಲಿ ತಿಳಿಸಿದರು.

ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯ ನಂತರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಪಕ್ಷವನ್ನು ಗ್ರಾಮೀಣ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಈಗಾಗಲೇ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಂಘಟಿಸುವ ಕೆಲಸ ಮಾಡಲಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ದೆಹಲಿ ಮಾದರಿ’ಯ ಆಡಳಿತ ಎಲ್ಲೆಡೆಗೆ ವಿಸ್ತರಿಸಬೇಕಿದೆ. ಆಮ್ ಆದ್ಮಿ ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಡದೆ, ರಾಜಕೀಯ ಕ್ರಾಂತಿಗಾಗಿ ಎಂಬ ಭಾವನೆ ಮೂಡಬೇಕಿದೆ. ರಾಜಕೀಯವಾಗಿ ಬದಲಾವಣೆ ತರಬೇಕಿದ್ದು, ದೆಹಲಿ ಮಾದರಿಯ ಆಡಳಿತ ವಿಶ್ವಮಾನ್ಯವಾಗಿದೆ. ನೀರು, ವಿದ್ಯುತ್, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಲಾಗಿದೆ. ಇದರಿಂದಾಗಿ ಬಡ ವರ್ಗದ ಜನರಿಗೆ ಪ್ರತಿ ತಿಂಗಳೂ ₹10 ಸಾವಿರದಿಂದ ₹12 ಸಾವಿರದ ವರೆಗೆ ಉಳಿತಾಯವಾಗುತ್ತಿದೆ. ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಹಣ ಲೂಟಿ ಮಾಡಿವೆ. ಎಲ್ಲೆಡೆ ಭ್ರಷ್ಟಾಚಾರ ಮನೆಮಾಡಿದೆ. ಇದನ್ನು ತಪ್ಪಿಸಲು ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ADVERTISEMENT

ಪಕ್ಷ ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಇತರೆಡೆಗೂ ವಿಸ್ತರಿಸಲಾಗುತ್ತದೆ. ಅದಕ್ಕಾಗಿ ಸಂಘಟನೆಗೆ ಒತ್ತು ನೀಡಲಾಗಿದೆ ಎಂದು ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದರು.

ರಾಜ್ಯ ಉಸ್ತುವಾರಿ ರೋಮಿ ಭಾಟಿ, ಮುಖಂಡರಾದ ಗೋಪಾಲ್ ವೆಂಕಟರೆಡ್ಡಿ, ಮುನೀರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.