ತುಮಕೂರು: ‘ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡುವಂತೆ ನಾನು ಸಹಿ ಸಂಗ್ರಹಿಸಿಲ್ಲ. ಬೇರೆಯವರು ಮಾಡಿರುವ ಮಾಹಿತಿಯೂ ನನಗೆ ಇಲ್ಲ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮರ್ಥ ಮುಖ್ಯಮಂತ್ರಿ ಇದ್ದಾರೆ. ಆ ಕಾರಣಕ್ಕೆ ಡಿಸಿಎಂ ಹುದ್ದೆ ಬೇಡ ಎಂದುಕೆಲ ದಿನಗಳ ಹಿಂದೆ ಹೇಳಿದ್ದೆ. ಕೆಲವು ಶಾಸಕರು, ಸಚಿವರು ಈ ವಿಚಾರವಾಗಿ ಸರಿಯಾಗಿ ಧ್ವನಿ ಎತ್ತಿದ್ದೀರಿ ಎಂದಿದ್ದರು. ಕೆಲವು ಸಚಿವರು ಮತ್ತು ಶಾಸಕರು ಡಿಸಿಎಂ ಹುದ್ದೆ ರದ್ದುಗೊಳಿಸಬೇಕು ಎಂದು ನನ್ನ ಬಳಿ ಹೇಳಿದ್ದರು’ ಎಂದರು.
‘ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಯಾರಿಗೆ ಈ ವಿಷಯ ತಲುಪಿಸಬೇಕೋ ಅವರಿಗೆ ತಲುಪಿಸಿದ್ದೇನೆ’.‘ನಾನು ಯಾರ ವಿರುದ್ಧವೂ ಇಲ್ಲ. ಹೈಕಮಾಂಡ್ ಆದೇಶಗಳನ್ನು ಮೀರಿ ಹೋಗುವವನಲ್ಲ. ಸಂದರ್ಭ ಬಂದಾಗ ಪಕ್ಷದ ವೇದಿಕೆಯಲ್ಲಿ ವಿಚಾರ ಪ್ರಸ್ತಾಪಿಸುವೆ’ ಎಂದರು.
ಡಿಸಿಎಂ ಹುದ್ದೆ ರದ್ದು ವಿಚಾರ ಹಾದಿ ಬೀದಿಯಲ್ಲಿ ಚರ್ಚಿಸುವ ವಿಚಾರವಲ್ಲ ಎಂದಿರುವ ಡಿಸಿಎಂ ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ಹೀಗೆ ಹೇಳುವವರು ಸಹ ಹಾದಿ ಬೀದಿಯಲ್ಲಿಯೇ ನಿಂತು ಮಾತನಾಡಿದ್ದಾರೆ. ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.