ತಿಪಟೂರು: ಪೌರ ಕಾರ್ಮಿಕರ ಜೀವನಮಟ್ಟವನ್ನು ಮೇಲ್ದರ್ಜೆಗೇರಿಸುವ ಆಶಯ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಮೀಸೆ ತಿಮ್ಮನಹಳ್ಳಿ ಬಳಿಯ ಜಾಗದಲ್ಲಿ ಸರ್ಕಾರದಿಂದ ಜಿ-ಪ್ಲಸ್ 2 ಮನೆ ನಿರ್ಮಾಣ ಮಾಡುವ ಚಿಂತನೆಯಿದೆ. ಅಲ್ಲಿಯೂ ಮನೆಗಳನ್ನು ಪೌರ ಕಾರ್ಮಿಕರಿಗೆ ಕಾಯ್ದಿರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ನಗರದ ನಗರಸಭೆ ಆವರಣದಲ್ಲಿ ಸೋಮವಾರ ನಡೆದ 10ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಗರದ ಕಸವನ್ನು ತೆಗೆದು ಸುಂದರ ನಗರವನ್ನಾಗಿಸುವಂತಹ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ. ಕಾರ್ಮಿಕ ವರ್ಗದ ಬೆಳವಣಿಗೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಮನುಷ್ಯತ್ವವೇ ಇಲ್ಲದಂತಹ ಕೆಲಸ ಮಾಡಿಸುತ್ತಿದ್ದಂತಹ ಕಾಲವಿತ್ತು. ಇಂದು ಗೌರವಯುತವಾಗಿ ನಡೆಸಿಕೊಳ್ಳುವ ಕಾಲ ಬಂದಿದೆ ಎಂದರು.
ಪೌರ ಕಾರ್ಮಿಕರಿಗೆ ಕೆಲಸದ ಸಂದರ್ಭದಲ್ಲಿ ಅಗತ್ಯವಿರುವಂತಹ ಮೂಲಸೌಕರ್ಯ ಒದಗಿಸಿಕೊಡಲಾಗಿದೆ. ಇನ್ನೂ ಕೆಲವು ಪೌರ ಕಾರ್ಮಿಕರಿಗೆ ನಿವೇಶನ, ಮನೆ ಕಟ್ಟಿಕೊಳ್ಳಲು ಸಹಾಯ ಮಾಡಲಾಗಿದೆ. ಹಲವಾರು ಪೌರ ಕಾರ್ಮಿಕರ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಡಾಕ್ಟರ್, ಎಂಜಿನಿಯರ್ಗಳಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಉಪಾಧ್ಯಕ್ಷ ಸೋಪ್ಪು ಗಣೇಶ್ ಮಾತನಾಡಿ, ನಗರಸಭೆಯ ಹಲವಾರು ಪೌರ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆವಹಿಸಿದ್ದ ಪಿ.ಜೆ. ರಾಮಮೋಹನ್ ಮಾತನಾಡಿದರು.
ನೂತನ ಕಸ ವಿಲೇವಾರಿ ವಾಹನಗಳಿಗೆ ಸಚಿವ ನಾಗೇಶ್ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್, ಮಾಜಿ ಉಪಾಧ್ಯಕ್ಷೆ ಊರ್ ಬಾನು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕಾಂತರಾಜು, ಸದಸ್ಯರಾದ ಯೋಗೀಶ್, ಜಯರಾಂ, ಸಂಗಮೇಶ್, ಪ್ರಸನ್ನ, ಪೌರಾಯುಕ್ತ ಉಮಾಕಾಂತ್, ಎಇಇ ನಾಗೇಶ್, ಪರಿಸರ ಎಂಜಿನಿಯರ್ ರಾಘವೇಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.