ತುಮಕೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ಬಜರಂಗದಳದ ಮುಖಂಡರಾದ ಮಂಜು ಭಾರ್ಗವ್, ಜಿ.ಕೆ.ಶ್ರೀನಿವಾಸ್, ಆಂಟೊನಿ ಡೇವಿಡ್, ಶರತ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಜಿಲ್ಲಾಧಿಕಾರಿ ಕಚೇರಿಯಲ್ಲಿ ನನ್ನನ್ನು ತಡೆದು, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ’ ಎಂದು ಜಯನಗರ ಠಾಣೆ ಸಬ್ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಯಾಗಿರುವ ಮರಳೂರು ದಿಣ್ಣೆಯ ನಿವಾಸಿ ಪ್ರಶಾಂತ್ ಮತ್ತು ಆತನ ಸಹಚರರಾದ ಆಂಟೊನಿ ಡೇವಿಡ್, ರವಿ, ಮಣಿಕಂಠ ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳುವ ಉದ್ದೇಶದಿಂದ ವಶಕ್ಕೆ ಪಡೆಯಲು ಹೋದಾಗ ಪ್ರಶಾಂತ್ ಮಾತ್ರ ಸಿಕ್ಕಿದ್ದು, ಉಳಿದವರು ನಾಪತ್ತೆಯಾಗಿದ್ದರು. ಪ್ರಶಾಂತ್ನನ್ನು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರು ಪಡಿಸಲು ಕರೆದುಕೊಂಡು ಬರುವಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನ್ನನ್ನು ತಡೆದಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.