ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಸಂಕೇತವಾಗಿದ್ದಾರೆ ಎಂದು ಹಿರಿಯ ಕಲಾವಿದ ಡಾ.ಲಕ್ಷ್ಮಣ್ದಾಸ್ ನುಡಿದರು.
ನಗರದ ಸತ್ಯಮಂಗಲದ ಹೇಮಾದ್ರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ತನ್ನ ಸಾಮರ್ಥ್ಯದಿಂದ ಭಾರತದ ಹೆಸರನ್ನು ವಿಶ್ವದಲ್ಲಿ ಪ್ರಖ್ಯಾತಗೊಳಿಸಿದ ಮಹಾನ್ ಸಾಧಕ. ಅಂತಹವರ ತತ್ವ, ಆದರ್ಶಗಳನ್ನು ಇಂದಿನ ಯುವಜನರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜೆ.ಪರಶುರಾಮ, ‘ಶಿಸ್ತು, ಸ್ವಾಭಿಮಾನ, ಬದ್ಧತೆ ಇದ್ದರೆ ಯಾವುದೇ ವೃತ್ತಿಯಲ್ಲಿ ಬೇಕಾದರೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಕಾಲೇಜಿ ಆಧಾರವಾಗಿದ್ದಾರೆ. ತಾವು ಓದಿದ ಕಾಲೇಜಿ ಏನಾದರೂ ಸಹಕಾರವನ್ನು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು’ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ವಿ.ಟಿ.ತಿಪ್ಪೇಸ್ವಾಮಿ,‘ ತಮ್ಮ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಿದ ಅಂಬೇಡ್ಕರ್ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನ ಆಚರಿಸುವಂತಾಗಬೇಕು’ ಎಂದರು.
ಕಲಾವಿದ ಹೆಬ್ಬೂರು ಮಂಜು, ಹೇಮಾದ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಬಿ.ಕೆ.ನಟರಾಜು, ಹೇಮಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿ.ಟಿ.ಮೋಹನ್, ಉಪನ್ಯಾಸಕರಾದ ಎಚ್.ಕೆ.ಕಾವ್ಯ, ಕೆ.ಎನ್.ಜೀವಿತಾ, ಆಫ್ಸರಿ ಕೌಸರ್, ಬಿಬಿ ಫಾತಿಮಾ, ರಮ್ಯ, ರಾಜು ಹಾಗೂ ರಂಗನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.