ಗುಬ್ಬಿ: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 73ರ ಕಾಮಗಾರಿ ಬಹುತೇಕ ಮುಗಿದಿದ್ದರೂ, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸರ್ವಿಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ.
ತಾಲ್ಲೂಕಿನ ಎಂ.ಎಚ್. ಪಟ್ಟಣ ಬಳಿಯ ವರ್ತುಲ ರಸ್ತೆಯ ಪ್ರಾರಂಭದಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆ ಕಿರಿದಾಗಿದ್ದು, ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರ ಮಾಡುವಂತಾಗಿದೆ. ಸರ್ವಿಸ್ ರಸ್ತೆ ಇಳಿಜಾರಿನಂತಿದ್ದು, ಪಕ್ಕದಲ್ಲಿ ಕೊರಕಲು ಬಿದ್ದಿರುವುದರಿಂದ ಭಯದಲ್ಲಿಯೇ ಸಂಚರಿಸುವಂತಾಗಿದೆ ಎಂದು ವಾಹನ ಸವಾರರು ದೂರಿದ್ದಾರೆ.
ಸರ್ವಿಸ್ ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಯಾವುದೇ ರಕ್ಷಣಾ ಕ್ರಮ ಕೈಗೊಳ್ಳದಿರುವುದರಿಂದ ವಾಹನ ಸವಾರರು ಆತಂಕದಲ್ಲಿ ಚಲಿಸುವಂತಾಗಿದೆ.
ಇಳಿಜಾರಿನಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದು, ಅಗತ್ಯ ಸೂಚನಾ ಫಲಕ ಹಾಗೂ ಪ್ರತಿಫಲನಗಳನ್ನು ಅಳವಡಿಸಿಲ್ಲ. ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದವರು ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಡೆ ನಿರ್ಮಿಸಬೇಕಿತ್ತು. ಆದರೆ ಅಂತಹ ಯಾವುದೇ ಅಗತ್ಯಕ್ರಮ ಕೈಗೊಳ್ಳದೆ ಕೇವಲ ರಸ್ತೆ ಉಬ್ಬುಗಳನ್ನು ಮಾತ್ರಹಾಕಿ ಸುಮ್ಮನಾಗಿದ್ದಾರೆ. ಹಾಗಾಗಿ ಭಯದಲ್ಲಿಯೇ ವಾಹನ ಚಲಾಯಿಸುವಂತಾಗಿದೆ ಎಂದು ವಾಹನ ಸವಾರ ಶಶಿಧರ್ ಬೇಸರ ವ್ಯಕ್ತಪಡಿಸಿದರು.
ಮಳೆ ಬಂದರೆ ರಸ್ತೆಯಲ್ಲಿ ಹೆಚ್ಚು ನೀರು ಹರಿದು ವಾಹನ ಚಲಾಯಿಸಲು ಸಾಧ್ಯವಾಗದಂತಾಗುತ್ತದೆ. ರಸ್ತೆ ಪಕ್ಕ ತುಂಬಾ ಆಳವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಸವಾರರು ಉರಳಿ ಬೀಳುವುದು ನಿಶ್ಚಿತ. ಸಂಬಂಧಿಸಿದವರು ತುರ್ತುಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸಾರ್ವಜನಿಕರು.
ರಸ್ತೆಯಲ್ಲಿ ಅಪಘಾತವಾದಾಗ ಪರದಾಡುವ ಅಧಿಕಾರಿಗಳು ಮುಂಜಾಗ್ರತಾ ಕ್ರಮವಹಿಸಿದ್ದಲ್ಲಿ, ಅಪಘಾತಗಳನ್ನು ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎನ್ನುತ್ತಾರೆ ಗ್ರಾಮಸ್ಥರಾದ ಸದಾಶಿವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.