ADVERTISEMENT

ಅನ್ನಪೂರ್ಣ: ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಸಿಯೂಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 14:14 IST
Last Updated 1 ಜುಲೈ 2023, 14:14 IST
ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಆರಂಭಿಸಿರುವ ‘ಅನ್ನಪೂರ್ಣ’ ಯೋಜನೆಗೆ ಜಪಾನಂದಜೀ ಮಹಾರಾಜ್ ಶನಿವಾರ ಚಾಲನೆ ನೀಡಿದರು
ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಆರಂಭಿಸಿರುವ ‘ಅನ್ನಪೂರ್ಣ’ ಯೋಜನೆಗೆ ಜಪಾನಂದಜೀ ಮಹಾರಾಜ್ ಶನಿವಾರ ಚಾಲನೆ ನೀಡಿದರು   

ಶಿರಾ: ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರ ಶೈಕ್ಷಣಿಕ ಗುಣಮಟ್ಟದ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ ಜನಪ್ರತಿನಿಧಿಗಳು ಅಳವಡಿಸಿಕೊಂಡರೆ ದೇಶದಲ್ಲಿ ಕರ್ನಾಟಕ ಗುಣಮಟ್ಟದ ಶಿಕ್ಷಣ ನೀಡುವ ಅಗ್ರಗಣ್ಯ ರಾಜ್ಯವಾಗುವುದು ಎಂದು ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದಜೀ ಮಹಾರಾಜ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ತಮ್ಮ ಶಾಸಕರ ವೇತನ ಮತ್ತು ಭತ್ಯೆಯ ಸಂಪೂರ್ಣ ಹಣವನ್ನು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಮೀಸಲಿಟ್ಟಿರುವ ‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಹೇಳಿರುವಂತೆ ಹಸಿದವನಿಗೆ ಮೊದಲು ಅನ್ನ ನೀಡಿ ನಂತರ ವೇದಾಂತ ಎಂಬ ಮಾತಿನಂತೆ ತಾವು ವಿದ್ಯಾರ್ಜನೆಯ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು ಈಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 1,700 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿದಾನಂದ ಎಂ.ಗೌಡ ಅವರಿಗಿರುವ ಕಾಳಜಿ ತೋರಿಸುತ್ತದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ತನ್ನ ವೇತನ ಮತ್ತು ಭತ್ಯೆಗಳನ್ನು ಈ ಯೋಜನೆಗೆ ಸಂಪೂರ್ಣವಾಗಿ ಅರ್ಪಿಸಿಲಾಗುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳು ಬಹುತೇಕ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಂದ ಬಂದವರಾಗಿದ್ದು, ಹಸಿವಿನಿಂದ ಪಾಠ ಪ್ರವಚನ ಆಲಿಸಿದರೂ, ಅದು ಅರ್ಥವಾಗುವುದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಮಧ್ಯಾಹ್ನದ ಊಟ ನೀಡಲು ತೀರ್ಮಾನಿಸಲಾಗಿದೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೆಂಕಟೇಶ್ವರಲು, ಪ್ರಾಂಶುಪಾಲ ಡಾ.ರಂಗಪ್ಪ, ನಗರಸಭೆ ಸದಸ್ಯ ಆರ್.ರಾಮು, ಮುಖಂಡರಾದ ಮದಲೂರು ನರಸಿಂಹಮೂರ್ತಿ, ಕಸಾಪ ಅಧ್ಯಕ್ಷ ಪಾಂಡುರಂಗಪ್ಪ, ಡಾ.ಪಿ‌.ಎಚ್.ಮಹೇಂದ್ರಪ್ಪ, ಡಾ.ರಾಮಕೃಷ್ಣ, ವಿ‌.ವಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್, ನಾಗಭೂಷಣ್, ರಾಮಣ್ಣ, ಈರಣ್ಣ ಪಟೇಲ್, ಚಿಕ್ಕಣ್ಣ, ಕರಿಯಣ್ಣ, ಪರಮೇಶ್ ಗೌಡ ಇದ್ದರು.

ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರು ಆರಂಭಿಸಿರುವ ‘ಅನ್ನಪೂರ್ಣ’ ಯೋಜನೆಗೆ ಜಪಾನಂದಜೀ ಮಹಾರಾಜ್ ಶನಿವಾರ ಚಾಲನೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.