ತುಮಕೂರು: ರೈತರ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬುವುದು ಹಾಗೂ ಕೃಷಿ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಗಳಿಂದಾಗಿ ರೈತರು, ಕೃಷಿಗೆ ಆಗುತ್ತಿರುವ ನಷ್ಟದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜ. 15ರ ವರೆಗೆ ಒಂದು ವಾರ ಕಾಲ ವೆಲ್ಫೇರ್
ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡಿದೆ.
ಜನರೊಂದಿಗೆ ಚರ್ಚೆ, ಸಂವಾದ, ಹೋರಾಟ, ಪ್ರತಿಭಟನಾ ಮೆರವಣಿಗೆ, ಸಂಸದ, ಶಾಸಕರ ಕಾರ್ಯಾಲಯ, ಮನೆಗಳ ಮುಂದೆ ಪ್ರತಿಭಟನೆ ಮಾಡಲಾಗುವುದು. ಅನ್ನದಾತರ ಪರವಾದ ಹೋರಾಟಕ್ಕೆ ರಾಜ್ಯದ ಪ್ರಜ್ಞಾವಂತ ಜನತೆ, ವಿದ್ಯಾರ್ಥಿ, ಯುವಜನರು, ಪ್ರಗತಿಪರ ಸಂಘಟನೆಗಳು ಜತೆಯಾಗಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷತಾಹೀರ್ ಹುಸೇನ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ಸೇರಿಕೊಂಡು ರೈತ ವಿರೋಧಿ ಕಾಯ್ದೆಗಳನ್ನು ಜಾರಿಮಾಡಲು ಹೊರಟಿದೆ. ಈ ಕಾಯ್ದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಲಿದ್ದು, ರೈತರು ಬೀದಿಗೆ ಬೀಳುತ್ತಾರೆ. ಕೃಷಿ ನಾಶಗೊಳಿಸಿ ಅಂಬಾನಿ, ಅದಾನಿ ಸೇರಿದಂತೆ ಕಾರ್ಪೋರೇಟ್ ಕಂಪನಿಗಳ ಕೈಗೆ ಕೃಷಿ ಕ್ಷೇತ್ರ ನೀಡ
ಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೋರೇಟ್, ಬಂಡವಾಳಶಾಹಿಗಳ ಹಿತ ಕಾಯುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಜತೆಗೆ ನಿಂತರೆ ದೇಶದ ಜತೆಗೆ ನಿಂತಂತೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಮಾಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ತಾಜುದ್ದೀನ್ ಶರೀಫ್, ರಾಜ್ಯ ಕಾರ್ಯಕಾರಣಿ ಸದಸ್ಯ ಪರಮೇಶ್ವರಯ್ಯ, ಅಜೀಜ್ ಜಾಗೀರ್ದಾರ್, ದಲಿತ ಸಂಘರ್ಷ ಸಮಿತಿ ಪಿ.ಎನ್.ರಾಮಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.