ADVERTISEMENT

ಸಿದ್ದರಾಮಯ್ಯ ಎಲ್ಲಿರುವರೊ ಅಲ್ಲೆ ನಾನು

ಐ.ಡಿ.ಹಳ್ಳಿ ಗ್ರಾಮದಲ್ಲಿ ಬ್ಯಾಂಕ್ ಶಾಖೆ ುದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:30 IST
Last Updated 8 ಡಿಸೆಂಬರ್ 2019, 20:30 IST
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಸಂಸದ ಜಿ.ಎಸ್.ಬಸವರಾಜು ಉದ್ಘಾಟಿಸಿದರು
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಶಾಖೆಯನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಸಂಸದ ಜಿ.ಎಸ್.ಬಸವರಾಜು ಉದ್ಘಾಟಿಸಿದರು   

ಮಧುಗಿರಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷ ನನ್ನದು. ಅವರು ಎಲ್ಲಿರುತ್ತಾರೋ ಅಲ್ಲೇ ನಾನು ಇರುತ್ತೇನೆ’ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲ್ಲೂಕು ಐ.ಡಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಮಧುಗಿರಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿಯ ವಿಶೇಷ ಅನುದಾನ ನೀಡಿದ್ದರು. ಮಧುಗಿರಿ ಜಿಲ್ಲಾ ಕೇಂದ್ರ, ಏಕಾಶಿಲಾ ಬೆಟ್ಟಕ್ಕೆ ರೋಪ್ ವೇ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದರು ಎಂದರು.

ADVERTISEMENT

ಪಹಣಿ ಹೊಂದಿರುವ ಎಲ್ಲ ರೈತರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಪಹಿಣಿ ಇಲ್ಲದವರು ಸ್ವಸಹಾಯ ಸಂಘ ರಚನೆ ಮಾಡಿಕೊಂಡರೆ ಅವರಿಗೂ ಸಾಲ ನೀಡಲಾಗುವುದು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅನ್ನು ಸದೃಢಗೊಳಿಸಬೇಕೆಂದು ತಿಳಿಸಿದರು.

‘ಬರಗಾಲ ಪೀಡಿತ ಕ್ಷೇತ್ರದಲ್ಲಿ ಇಷ್ಟು ಅಭಿವೃದ್ಧಿಯಾದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮತವಾಗಿ ಪರಿವರ್ತನೆಯಾಗಲಿಲ್ಲ. ನನ್ನ ಮನಸ್ಸಿಗೆ ಬೇಸರವಾಗಿ ಕ್ಷೇತ್ರಕ್ಕೆ ಬರಲು ಮನಸ್ಸಾಗಲಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಮಾತಿಗೆ ಮನ್ನಣೆ ನೀಡಿ ಕುಟುಂಬ ರಾಜಕೀಯ ಮಾಡುವ ಮಾಜಿ ಪ್ರಧಾನಿಯನ್ನು ಮನೆಗೆ ಕಳುಹಿಸಿದರು. ಮತದಾರರು ಪರಿವರ್ತನೆಯಾಗಿದ್ದಾರೆ. ಮನಸ್ಸಿಗೆ ಸಮಧಾನವಾಯಿತು’ ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ‘ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಕುಟುಂಬ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಆಡ್ಡಿಪಡಿಸಿದ್ದರಿಂದ ಜಿಲ್ಲೆಯ ಜನರೇ ಅವರನ್ನು ಜಿಲ್ಲೆಯಿಂದ ಹೊರಹಾಕಿದರು. ಮಧುಗಿರಿ ಕ್ಷೇತ್ರದ ಮತದಾರರ ಆರ್ಶೀವಾದ ಹಾಗೂ ಕೆ.ಎನ್.ರಾಜಣ್ಣ ಅವರ ಸಹಕಾರದಿಂದ ನಾನು ಸಂಸದನಾಗಿದ್ದೇನೆ. ಅವರು ಯಾವುದೇ ಪಕ್ಷದಲ್ಲಿದ್ದರು ಕೂಡ ನನ್ನ ಸಂಪೂರ್ಣ ಸಹಕಾರ ಇರುತ್ತದೆ’ ಎಂದು ತಿಳಿಸಿದರು.

ರಾಜ್ಯ ಮಾರಾಟ ಮಹಾಮಂಡಲದ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ, ರೈತರು ಈ ಹಿಂದೆ ಹಣದ ವಹಿವಾಟಿಗೆ ಮಧುಗಿರಿಯ ಬ್ಯಾಂಕ್‌ಗೆ ಬರಬೇಕಾಗಿತ್ತು. ಅಲೆದಾಟ ತಪ್ಪಿಸುವ ದೃಷ್ಟಿಯಿಂದ ಗ್ರಾಮದಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ , ಸಂಸದ ಜಿ.ಎಸ್.ಬಸವರಾಜು ಅವರನ್ನು ಅದ್ಧೂರಿ ಸ್ವಾಗತ ಮಾಡುವ ಮೂಲಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವೇದಿಕೆಗೆ ಬರ ಮಾಡಿಕೊಂಡರು.

ಮಾಜಿ ಶಾಸಕ ಕೆ.ಲಕ್ಕಪ್ಪ, ಜಿ.ಪಂ ಸದಸ್ಯ ಜಿ.ಜೆ.ರಾಜಣ್ಣ, ಚೌಡಪ್ಪ, ಮಂಜುಳಾ ಆದಿನಾರಾಯಣ ರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ತಾ.ಪಂ ಅಧ್ಯಕ್ಷೆ. ಇಂದಿರಾ ದೇನನಾಯ್ಕ, ಸದಸ್ಯರಾದ.ಕೆ.ಎ.ರಾಜು, ಮಹಾದೇವಿ, ಪಾರ್ವತಮ್ಮ, ವಿ.ಎಸ್.ಎಸ್.ಎನ್.ಅಧ್ಯಕ್ಷ ಶಿವಶಂಕರ ರೆಡ್ಡಿ, ಚಿಕ್ಕೋಬಳರೆಡ್ಡಿ, ಎಂ.ಬಿ.ಮರಿಯಣ್ಣ, ಬಿ.ಎಸ್.ಕುಬೇಂದ್ರನಾಯ್ಕ, ಎಸ್.ಹನುಮಾನ್, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮೀನಾರಾಯಣ್, ಎಚ್.ಟಿ.ತಿಮ್ಮರಾಜು, ಎಂ.ಕೆ.ನಂಜುಂಡಯ್ಯ, ಆಯ್ಯೂಬ್, ತಿಮ್ಮರಾಜು, ಲಾಲಪೇಟೆ ಮಂಜುನಾಥ್, ನಾಗೇಶ್ ಬಾಬು, ಎಸ್.ಡಿ.ಕೃಷ್ಣಪ್ಪ, ರಾಮದಾಸು, ಶನಿವಾರಂರೆಡ್ಡಿ. ಎಸ್.ಬಿ.ಟಿ.ರಾಮು, ಸದಾಶಿವರೆಡ್ಡಿ, ಬ್ಯಾಂಕ್ ನೌಕರರಾದ ಸೀತಾರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.