ಮಧುಗಿರಿ: ಮಧುಗಿರಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನವನ್ನು ಗ್ರಾಮಾಂತರ ಪ್ರದೇಶದ ಬಹುತೇಕ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ರಸ್ತೆ, ಶಾಲೆ ಮತ್ತು ಅಂಗನವಾಡಿ ದುರಸ್ತಿ, ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ಹಾಗೂ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿರುವ ಹೆಲ್ತ್ ಆ್ಯಂಡ್ ಫಿಟ್ನೆಸ್ ಕೇಂದ್ರಕ್ಕೆ ಜಿಮ್ ಸಲಕರಣೆಗಾಗಿ ₹8 ಲಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಿಸಲು ₹10 ಲಕ್ಷ ಅನುದಾನವನ್ನು ಶಾಸಕ ಎಂ.ವಿ.ವೀರಭದ್ರಯ್ಯ ಅವರು ನೀಡಿದ್ದಾರೆ.
ಮೂರು ವರ್ಷದ ಅವಧಿಯಲ್ಲಿ ಬಿಡುಗಡೆಯಾದ ಶಾಸಕರ ಅನುದಾನ ಶೇ 98ರಷ್ಟು ಅನುದಾನ ಬಳಕೆಯಾಗಿದೆ. ಕೆಲ ಕಾಮಗಾರಿಗಳು ಮಾತ್ರ ಪ್ರಗತಿಯಲ್ಲಿವೆ. ಎರಡು ವರ್ಷದಲ್ಲಿ ಸರ್ಕಾರದಿಂದ ಬಿಡುಗಡೆಯಾದ ₹5 ಕೋಟಿ ಅನುದಾನದ ಪೈಕಿ ₹1.23 ಕೋಟಿ ಅನುದಾನವನ್ನು ಕ್ಷೇತ್ರದ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ. ಇನ್ನುಳಿದ ಅನುದಾನವನ್ನು ಶಾಲೆ, ಅಂಗನವಾಡಿ, ಸಮುದಾಯಭವನ, ರಸ್ತೆ, ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್ ಖರೀದಿ ಮಾಡಲು ಅನುದಾನ ನೀಡಿದ್ದಾರೆ.
2018 ಸಾಲಿನಲ್ಲಿ ₹2 ಕೋಟಿ ವೆಚ್ಚದ 72 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. 67 ಕಾಮಗಾರಿಗಳು ಪೂರ್ಣಗೊಂಡು ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. 2019 ಸಾಲಿನಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಅವರು ಜನರು ಹಾಗೂ ಮುಖಂಡರ ಬೇಡಿಕೆಯಂತೆ ₹2 ಕೋಟಿ ವೆಚ್ಚದ 55 ಕಾಮಗಾರಿಗಳ ಪಟ್ಟಿಯನ್ನು ನೀಡಿದ್ದಾರೆ. 51 ಕಾಮಗಾರಿಗಳು ಪೂರ್ಣಗೊಂಡಿವೆ. ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದ ಹೆಲ್ತ್ ಅಂಡ್ ಪಿಟ್ ನೆಸ್ ಕೇಂದ್ರಕ್ಕೆ ಜಿಮ್ ಸಲಕರಣೆಗಾಗಿ ನೀಡಿದ್ದ ₹8 ಲಕ್ಷ ಅನುದಾನ ಈವರೆಗೂ ಬಳಕೆಯಾಗಿಲ್ಲ ಹಾಗೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ದಾಖಲೆಗಳು ಹೇಳುತ್ತಿವೆ.
2020ನೇ ಸಾಲಿನಲ್ಲಿ ₹1 ಕೋಟಿ ವೆಚ್ಚದ 24 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ ಕಾಮಗಾರಿಗಳು ಪೂರ್ಣ
ಗೊಂಡಿವೆ. ಎರಡು ವರ್ಷದಲ್ಲಿ ಕ್ಷೇತ್ರದ ವಿವಿಧ ಗ್ರಾಮದ ವಿವಿಧ 63ದೇವಾಲಯಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಕ್ಷೇತ್ರದ ಬೋರಾಗುಂಟೆ ಹಾಗೂ ಬ್ಯಾಡರಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ನೀಡಿದ್ದ ತಲಾ ₹6 ಲಕ್ಷ ಅನುದಾನ ನೀಡಿದ್ದಾರೆ. ಆದರೆ ನೀರಿನ ಘಟಕ ನಿರ್ಮಾಣ ಮಾಡಲುತಲಾ ₹1 ಲಕ್ಷ ಅನುದಾನದ ಕೊರತೆಯಿಂದ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ.
ಕ್ಷೇತ್ರದ ಬಡಿಗೊಂಡನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ₹2 ಲಕ್ಷ ಹಾಗೂ ಮರಿತಿಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ₹3 ಲಕ್ಷ ಶಾಸಕರು ಅನುದಾನ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.