ತಿಪಟೂರು: ನಗರ ಸಮೀಪದ ಕೊಪ್ಪ ಗ್ರಾಮದ ವಕೀಲ ಕೆ.ಎಸ್.ಶ್ರೀಧರ್ ಎಂಬುವರಿಗೆ ವ್ಯಕ್ತಿಯೊಬ್ಬ ಎಟಿಎಂ ಅದಲು ಬದಲು ಮಾಡಿ ₹ 55 ಸಾವಿರ ವಂಚಿಸಿದ್ದಾನೆ.
ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿರುವ ಶ್ರೀಧರ್ ‘ಡಿ. 31ರಂದು ಸಂಜೆ 5.30ರಲ್ಲಿ ಹಾಸನ ವೃತ್ತದ ಬಳಿ ಎಸ್ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿರುವಾಗ ಅಪರಿಚಿತ ವ್ಯಕ್ತಿ ನನ್ನ ಪಕ್ಕದಲ್ಲಿ ನಿಂತಿದ್ದನು. ಎಟಿಎಂ ಮಿಷನ್ನಲ್ಲಿ ಹಣ ಬರಲು ತೊಡಕಾದ್ದರಿಂದ ಆ ವ್ಯಕ್ತಿ ನನಗೆ ಸಹಾಯ ಮಾಡಿದನು.
₹ 5000 ಡ್ರಾ ಮಾಡಿಕೊಂಡೆ. ಆ ಸಮಯದಲ್ಲಿ ನನ್ನ ಎಟಿಎಂ ಕಾರ್ಡ್ ಕೈ ಜಾರಿ ಕೆಳಗಡೆ ಬಿತ್ತು. ನಾನು ಅದನ್ನು ಎತ್ತಿಕೊಳ್ಳಬೇಕೆನ್ನುವಷ್ಚರಲ್ಲಿ ಆ ಅಪರಿಚಿತ ವ್ಯಕ್ತಿ ಕಾರ್ಡ್ ಎತ್ತಿಕೊಟ್ಟು ಹೊರ ಹೋದನು. ಆದರೆ, ಅದನ್ನು ನಂತರ ಪರಿಶೀಲಿಸಿದಾಗ ಅದು ನನ್ನ ಕಾರ್ಡ್ ಆಗಿರದೆ ನಾರಾಯಣ ಎಂಬ ಹೆಸರಿರುವ ಕಾರ್ಡ್ ಆಗಿತ್ತು.
ರಾತ್ರಿ 8ರ ಸಮಯದಲ್ಲಿ ನನ್ನ ಮೊಬೈಲ್ಗೆ ಬ್ಯಾಂಕ್ನಿಂದ ಬಂದ ಸಂದೇಶದಲ್ಲಿ ‘ಶಿವಾಜಿ ಎಬಿಎ’ ಎಂಬುವರ ಖಾತೆಗೆ ನನ್ನ ಖಾತೆಯಿಂದ ₹ 40 ಸಾವಿರ ವರ್ಗಾವಣೆ ಆಗಿರುವುದು ತಿಳಿಯಿತು. ನಂತರ ಮತ್ತೆ ಅದೇ ವ್ಯಕ್ತಿ ₹ 15 ಸಾವಿರ ಮಾಡಿಕೊಂಡಿದ್ದರ ಕುರಿತೂ ಮೊಬೈಲ್ಗೆ ಸಂದೇಶ ಬಂತು. ಆಗ ನಾನು ಮೋಸ ಹೋಗಿರುವ ವಿಷಯ ತಿಳಿಯಿತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನ ಖಾತೆಯಿಂದ ₹ 55 ಸಾವಿರ ವರ್ಗಾವಣೆ ಮಾಡಿಕೊಂಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡು ಹಣ ಕೊಡಿಸಬೇಕು’ ಎಂದು ಕೋರಿದ್ದಾರೆ.
ಈ ಬಗ್ಗೆ ಬ್ಯಾಂಕ್ಗೆ ತಿಳಿಸಿ ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸಿ ದೂರು ಸಲ್ಲಿಸಿದ್ದೇನೆ ಎಂದು ಶ್ರೀಧರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.