ADVERTISEMENT

ಪ್ಲಾಸ್ಟಿಕ್ ಅಡ್ಡೆ ಮೇಲೆ ದಾಳಿ, 1200 ಕೆ.ಜಿ ವಶ

ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ನೇತೃತ್ವದಲ್ಲಿ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 15:49 IST
Last Updated 12 ಜುಲೈ 2019, 15:49 IST
ಶುಕ್ರವಾರ ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಇದ್ದ ಗೋದಾಮಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲಿಸಿದ ನೋಟ
ಶುಕ್ರವಾರ ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಇದ್ದ ಗೋದಾಮಿಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲಿಸಿದ ನೋಟ   

ತುಮಕೂರು: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡವು ನಗರದ ಮಂಡಿಪೇಟೆ, ಅಂತರಸನಹಳ್ಳಿ ಸೇರಿದಂತೆ ವಿವಿಧ ಕಡೆ ವಾರದಲ್ಲಿ ಮೂರ್ನಾಲ್ಕು ಬಾರಿ ದಾಳಿ ನಡೆಸಿದರೂ ಟನ್‌ ಗಟ್ಟಲೆ ನಿಷೇಧಿತ ಪ್ಲಾಸ್ಟಿಕ್ ಮತ್ತೆ ಮಾರುಕಟ್ಟೆ ಆವರಿಸುತ್ತಲೇ ಇದೆ.

ಎರಡು ದಿನಗಳ ಹಿಂದೆಯಷ್ಟೇ ದಾಳಿ ನಡೆಸಿದ್ದ ಅಧಿಕಾರಿಗಳ ತಂಡವು ಶುಕ್ರವಾರ ಮತ್ತೆ ಮಂಡಿಪೇಟೆಯಲ್ಲಿ ಅಮ್ಜದ್ ಪಾಷಾ ಎಂಬುವರ ಗೋದಾಮಿನ ಮೇಲೆ ದಾಳಿ ನಡೆಸಿ 1200 ಕೆಜಿ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದೆ. ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಮಾಡಿದ ಗೋದಾಮು ಮಾಲೀಕರಿಗೆ ₹ 50 ಸಾವಿರ ದಂಡವನ್ನು ಪಾಲಿಕೆ ಆಯುಕ್ತರಾದ ಟಿ.ಭೂಬಾಲನ್ ವಿಧಿಸಿದ್ದಾರೆ.

ಗುರುವಾರ ಸಂಜೆಯೇ ಗೋದಾಮಿನ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳ ತಂಡುವ ತೆರಳಿದಾಗ ಗೋದಾಮಿನ ಮಾಲೀಕರು ಇದಕ್ಕೆ ಅವಕಾಶ ಕೊಡದೇ ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಪರಿಶೀಲನೆಗೆ ಅವಕಾಶ ಕೊಡದೇ ಇದ್ದಾಗ ಪಾಲಿಕೆ ಅಧಿಕಾರಿಗಳು ಗೋದಾಮಿಗೆ ಬೀಗ ಮುದ್ರೆ ಹಾಕಿದ್ದರು.

ADVERTISEMENT

ಶುಕ್ರವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಗೋದಾಮು ತೆರೆದು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಲೋಟ ಸೇರಿದಂತೆ ನಿಷೇಧಿತ ವಿವಿಧ ಮಾದರಿಯ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್, ನೈರ್ಮಲ್ಯ ವಿಭಾಗದ ಅಧಿಕಾರಿಗಳಾದ ಕೆ.ಎಸ್. ಮೃತ್ಯುಂಜಯ, ಮೋಹನ್, ಕೃಷ್ಣಮೂರ್ತಿ, ಸಿಬ್ಬಂದಿ ಚಿಕ್ಕಸ್ವಾಮಿ, ರುದ್ರೇಶ್ ದಾಳಿ ನಡೆಸಿದ ತಂಡದಲ್ಲಿದ್ದರು.

ಈಚೆಗಿನ ದಾಳಿನಲ್ಲಿ ಅಂದಾಜು 9 ಟನ್‌ಗಿಂತಲೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಜನಜಾಗೃತಿಯಾಗುತ್ತಿದ್ದರೂ ಮಾರಾಟ ಜಾಲ ಮಾತ್ರ ತನ್ನದೇ ಆದ ಜಾಲದ ಮೂಲಕ ಮಾರುಕಟ್ಟೆಗೆ ನಿಷೇಧಿತ ಪ್ಲಾಸ್ಟಿಕ್ ಹರಿಬಿಡುತ್ತಿದೆ. ಅಂಗಡಿ, ಹೊಟೇಲ್‌ಗಳಲ್ಲಿ ಗ್ರಾಹಕರಿಗೆ ನಿಷೇಧಿತ ಪ್ಲಾಸ್ಟಿಕ್ ಕೊಡುವುದು ಕಡಿಮೆಯಾಗುತ್ತಿದೆ. ಇಂತಹ ಕಡೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

'₹ 5 ಸಾವಿರದಿಂದ ₹ 20,30 ಸಾವಿರದವರೆಗೂ ದಂಡ ಹಾಕಿದರೂ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ, ಸತತ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.