ಶಿರಾ: ‘ರಾಜ್ಯದಲ್ಲಿ ಹಿಂದುಳಿದ ಮತ್ತು ತಳ ಸಮುದಾಯಗಳು ಸಂಘಟನೆಯಾಗಿ ಸಾಮಾಜಿಕ ಅಭಿವೃದ್ಧಿ ಹೊಂದುವುದನ್ನು ತಡೆಗಟ್ಟಲು ಮೇಲ್ವರ್ಗದ ಮಠಗಳ ಸ್ವಾಮೀಜಿಗಳು ಹುನ್ನಾರ ನಡೆಸಿದ್ದಾರೆ’ ಎಂದು ಕನಕ ಗುರು ಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
‘ಜಾತಿ ಮಠಗಳಿಂದ ಸಮಾಜ ಕಲುಷಿತಗೊಂಡಿದೆ ಎಂಬುದಾಗಿ ರಂಭಾಪುರಿ ಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಆದರೆ ತಳ ಸಮುದಾಯದವರು ಸ್ಥಾಪಿಸಿರುವ ಮಠ, ಪೀಠಗಳಿಂದ ಯಾವುದೇ ಸಮಾಜದ ಸ್ವಾಸ್ಥ್ಯ ಹಾಳಾಗಿಲ್ಲ. ಬದಲಿಗೆ ಎಲ್ಲ ಹಿಂದುಳಿದ, ದಲಿತ ಸಮುದಾಯಗಳು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಜಾಗೃತಗೊಳಿಸುವ ಕೆಲಸವಾಗಿದೆ. ಇಂತಹ ಹೇಳಿಕೆ ನೀಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಇಲ್ಲವಾದರೆ ಎಲ್ಲ ಹಿಂದುಳಿದ ಮತ್ತು ತಳ ಸಮುದಾಯದ ಜನ ಬೀದಿಗಿಳಿದು ಖಂಡಿಸಬೇಕಾಗುತ್ತದೆ’ ಎಂದರು.
‘ಯಾವ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸ ಸಮಯದಲ್ಲಿ ಪರಿಶ್ರಮ ಹಾಕಿ, ತ್ಯಾಗ ಮನೋಭಾವದಿಂದ ತನ್ನ ಗುರಿಯೆಡೆಗೆ ತಲುಪಲು ಪ್ರತಿನಿತ್ಯ ಶ್ರಮವಹಿಸುತ್ತಾನೋ ಅಂತಹ ವಿದ್ಯಾರ್ಥಿ ತನ್ನ ಜೀವನದಲ್ಲಿ ಸಮಾಜ ಮೆಚ್ಚುವಂತಹ ಸಾಧನೆ ಮಾಡುತ್ತಾನೆ’ ಎಂದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಅಬಕಾರಿ ಇಲಾಖೆ ಉಪಾಧೀಕ್ಷಕ ವಿ.ಶೇಖರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ನಗರಸಭೆ ಸದಸ್ಯ ಎಸ್.ಎಲ್. ರಂಗನಾಥ್, ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ, ಕುರುಬರ ಸಂಘದ ಅಧ್ಯಕ್ಷ ಡಾ.ಎಸ್.ಮಂಜುನಾಥ್, ಡಾ.ಕೆ.ಸಿ.ರಘು ಮಾತನಾಡಿದರು.
ಮಧುಗಿರಿ ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್. ಲಕ್ಷ್ಮಣ್, ನಗರಸಭೆ ಸದಸ್ಯ ಎಸ್.ಪಿ. ಶಿವಶಂಕರ್, ತೇಜು ಭಾನುಪ್ರಕಾಶ್, ಕಸಾಪ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಸಿದ್ದೇಶ್ವರ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಸುಧಾಕರ್, ಮಧುಗಿರಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.