ADVERTISEMENT

ಬೇಸಿಗೆ ಶಿಬಿರ; ಮಕ್ಕಳ ಪ್ರತಿಭೆ ಅನಾವರಣ: ರತ್ನ ಕಲಮದಾನಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 14:04 IST
Last Updated 6 ಮೇ 2019, 14:04 IST
ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.   

ತುಮಕೂರು: ಮಕ್ಕಳು ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳ ಜೊತೆಗೆ ಕೊಕ್ಕೊ, ಕಬಡ್ಡಿ ಮತ್ತಿತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬೆಂಗಳೂರಿನ ಬಾಲಭವನ ಸೊಸೈಟಿಯ ಪ್ರಭಾರ ಕಾರ್ಯದರ್ಶಿ ರತ್ನ ಕಲಮದಾನಿ ಸಲಹೆ ನೀಡಿದರು.

ನಗರದ ಬಾಲಭವನದಲ್ಲಿ ಇತ್ತೀಚಿಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳ ಬೌದ್ಧಿಕ ಬೆಳವಣಿಗೆ ಮತ್ತು ಅವರಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಬೇಸಿಗೆ ಶಿಬಿರಗಳು ಅವಶ್ಯಕವಾಗಿವೆ. ಮುಂದಿನ ದಿನಗಳಲ್ಲಿ ಬೆಂಗಳೂರು ಬಾಲಭವನ ಸೊಸೈಟಿಯಿಂದ ಕ್ರೀಡಾ ಚಟುವಟಿಕೆ ಒಳಗೊಂಡಂತೆ ಮತ್ತಷ್ಟು ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.

ADVERTISEMENT

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಲಕ್ಷ್ಮಿ ಮಾತನಾಡಿ, ಬೇಸಿಗೆ ಶಿಬಿರ ಎಂದರೆ ಬಡವ-ಬಲ್ಲಿದರು ಎನ್ನದೆ ಎಲ್ಲ ವರ್ಗದ ಮಕ್ಕಳನ್ನು ಒಂದೆಡೆ ಸೇರಿಸಿ ನಡೆಸುವ ಚಟುವಟಿಕೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ‘ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಜಿಲ್ಲಾ ಬಾಲಭವನ ಸದಾಕಾಲ ತೆರೆದಿರುತ್ತದೆ’ ಎಂದರು.

ಮಕ್ಕಳ ಮನೋವಿಕಾಸ ಹಾಗೂ ಬೌದ್ಧಿಕ ಬೆಳವಣಿಗೆ ನೆರವಾಗುವಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಮಕ್ಕಳು ಹಾಗೂ ಪೋಷಕರ ಅಭಿಪ್ರಾಯ ಸಂಗ್ರಹಿಸಿದರು.

ಜಿಲ್ಲಾ ಬಾಲಭವನ ಸಂಘದ ಸದಸ್ಯ ಎಂ.ಬಸವಯ್ಯ, ‘ಮಕ್ಕಳಿಗೆ ಮನೆಯೂ ಬಾಲಭವನ ಆಗಬೇಕು. ನಾಗರಿಕತೆಯ ಬೆಳವಣಿಗೆಗೆ ಮೂಲವಾಗಿರುವ ಚಿತ್ರಕಲೆಯಲ್ಲಿಯೂ ಆಸಕ್ತಿ ತೋರುವುದರಿಂದ ಮಕ್ಕಳ ಚಿಂತನಾ ಹಾಗೂ ಕಲ್ಪನಾ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಹೇಳಿದರು.

ಸಂಗೀತ, ಚಿತ್ರಕಲೆ ಮತ್ತು ಈಜು ಕಲಿಯುವ ಉದ್ದೇಶದಿಂದ ಜಿಲ್ಲಾ ಬಾಲಭವನದಲ್ಲಿ ಈಜುಕೋಳ ನಿರ್ಮಾಣ, ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲು ಬಾಲಭವನ ಸೊಸೈಟಿ ಸಹಕಾರ ಅವಶ್ಯ ಎಂದರು.

ಜಿಲ್ಲಾ ಬಾಲಭವನ ವ್ಯವಸ್ಥಾಪಕ ಬಾಲಕೃಷ್ಣ, ಕಾರ್ಯಕ್ರಮ ಸಂಯೋಜಕಿ ಪಿ.ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.