ಶಿರಾ: ಬೆಸ್ಕಾಂ ವಿಭಾಗ (ಡಿವಿಜನ್) ಕಚೇರಿಯನ್ನು ಶೀಘ್ರ ಶಿರಾದಲ್ಲಿ ಪ್ರಾರಂಭಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಜ್ಯೋತಿನಗರದಲ್ಲಿ ಗುರುವಾರ ಬೆಸ್ಕಾಂನಿಂದ ₹17 ಕೋಟಿ ವೆಚ್ಚದ ಎಲ್.ಟಿ.ಎ.ಬಿ ಕೇಬಲ್ ಮತ್ತು ಎಚ್.ಟಿ ಕವರ್ಡ್ ಕಂಡಕ್ಟರ್ ಆಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಜೊತೆ ಶಿರಾದಲ್ಲಿ ಪ್ರಾದೇಶಿಕ ಕಚೇರಿ ಪ್ರಾರಂಭಿಸಲು ಚರ್ಚೆ ನಡೆಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ವಿದ್ಯುತ್ ಅಪಘಾತ, ಸೋರಿಕೆಯನ್ನು ತಪ್ಪಿಸಿ ನಿರಂತರವಾಗಿ ವಿದ್ಯುತ್ ನೀಡುವ ಉದ್ದೇಶದಿಂದ ₹85 ಕೋಟಿ ವೆಚ್ಚದಲ್ಲಿ ಎಲ್.ಟಿ.ಎ.ಬಿ ಕೇಬಲ್ ಮತ್ತು ಎಚ್.ಟಿ ಕವರ್ಡ್ ಕಂಡಕ್ಟರ್ ಆಳವಡಿಕೆಗೆ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ತಾಲ್ಲೂಕು ಮಟ್ಟದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಾದಲ್ಲಿ ಅನುಷ್ಠಾನ ಮಾಡುತ್ತಿದ್ದು ಹಂತ ಹಂತವಾಗಿ ಕಾಮಗಾರಿ ನಡೆಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು ಡ್ಯಾಗೇರಹಳ್ಳಿ ಬಳಿ 220 ಕೆ.ವಿ ವಿದ್ಯುತ್ ಸ್ಟೇಷನ್ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಕಳ್ಳಂಬೆಳ್ಳ ಭಾಗದಲ್ಲಿ 220 ಕೆ.ವಿ ವಿದ್ಯುತ್ ಸ್ಟೇಷನ್ ಹಾಗೂ ತಾಲ್ಲೂಕಿನ 8 ಕಡೆ ವಿದ್ಯುತ್ ಸಬ್ಸ್ಟೇಷನ್ ಪ್ರಾರಂಭಿಸಲಾಗುವುದು ಎಂದರು.
ಬೆಸ್ಕಾಂ ತುಮಕೂರು ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ, ಮಧುಗಿರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್, ನಗರ ಎಇಇ ಶಾಂತರಾಜು, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜೇಯ್ ಕುಮಾರ್, ನಗರಸಭೆ ಸದಸ್ಯರಾದ ತೇಜು ಭಾನುಪ್ರಕಾಶ್, ಬಿ.ಎಂ.ರಾಧಾಕೃಷ್ಣ, ಮಹೇಶ್ ಕುಮಾರ್, ಡಿ.ಸಿ.ಆಶೋಕ್, ಪಿ.ಬಿ.ನರಸಿಂಹಯ್ಯ, ಬೆಸ್ಕಾಂ ಸಲಹಾ ಸಮಿತಿ ಸದಸ್ಯ ನಾಗನಂದ, ನೂರುದ್ದೀನ್, ದಾಸರಹಳ್ಳಿ ಗೋಪಾಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.