ADVERTISEMENT

ಹುಳಿಯಾರು ಪ.ಪಂ: ಬಿಜೆಪಿ ಸೇರಿದ ಪಕ್ಷೇತರ: ಕಮಲಕ್ಕೆ ಪಾಳಯಕ್ಕೆ ಅಧಿಕಾರ ಖಚಿತ

ಪ.ಪಂ ಪಕ್ಷೇತರ ಸದಸ್ಯ ಕಮಲ ಪಾಳಯಕ್ಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:18 IST
Last Updated 5 ಏಪ್ರಿಲ್ 2021, 2:18 IST
ಪಕ್ಷೇತರ ಸದಸ್ಯ ಸೈಯದ್‌ ಜಹೀರ್‌ ಸಾಬ್‌ ಸಚಿವ ಜೆ.ಸಿ. ಮಾಧುಸ್ವಾಮಿ ಸಮ್ಮುಖದಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು
ಪಕ್ಷೇತರ ಸದಸ್ಯ ಸೈಯದ್‌ ಜಹೀರ್‌ ಸಾಬ್‌ ಸಚಿವ ಜೆ.ಸಿ. ಮಾಧುಸ್ವಾಮಿ ಸಮ್ಮುಖದಲ್ಲಿ ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು   

ಹುಳಿಯಾರು: ಪಟ್ಟಣ ಪಂಚಾಯಿತಿ ಚುನಾವಣೆ ಮುಗಿದಿದ್ದು ಫಲಿತಾಂಶದಿಂದಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇಬ್ಬರು ಪಕ್ಷೇತರ ಸದಸ್ಯರು ಸಚಿವ ಜೆ.ಸಿ. ಮಾಧುಸ್ವಾಮಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಅಧಿಕಾರ ಬಿಜೆಪಿಗೆ ಒಲಿಯುವುದು ಬಹುತೇಕ ಖಚಿತವಾಗಿದೆ.

ಒಟ್ಟು 16 ಸ್ಥಾನಗಳ ಪೈಕಿ ಬಿಜೆಪಿ 6 ಸ್ಥಾನದಲ್ಲಿ ಮೇಲುಗೈ ಸಾಧಿಸಿದರೆ, ಕಾಂಗ್ರೆಸ್‌ 5 ಹಾಗೂ ಜೆಡಿಎಸ್‌ 3 ಸ್ಥಾನ ಪಡೆದಿತ್ತು. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. ಯಾರಿಗೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಪಕ್ಷೇತರರಿಗೆ ಡಿಮ್ಯಾಂಡ್‌ ಹೆಚ್ಚಾಗಿತ್ತು.

ಆದರೆ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಎಸ್. ಕಿರಣ್‌ಕುಮಾರ್‌ ಬೆಂಬಲಿಗರಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದ ಬಿ.ಜಿ. ಶ್ರುತಿ ಇತ್ತೀಚೆಗೆ ಮಾಧುಸ್ವಾಮಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಸೈಯದ್‌ ಜಹೀರ್‌ ಸಾಬ್‌ ಮಾತ್ರ ಅಧ್ಯಕ್ಷರ ಮೀಸಲಾತಿಯನ್ನು ಕಾದು ನೋಡುವ ತಂತ್ರಕ್ಕೆ ಒಳಗಾಗಿದ್ದರು.

ADVERTISEMENT

ಆದರೆ ಅವರು ಸಹ ಭಾನುವಾರ ಮಾಧುಸ್ವಾಮಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ 6, ಇಬ್ಬರು ಪಕ್ಷೇತರರು, ಲೋಕಸಭಾ ಸದಸ್ಯರು ಮತ್ತು ಶಾಸಕರ ಎರಡು ಮತ ಸೇರಿದರೆ ಸದಸ್ಯರ ಸಂಖ್ಯೆ 10ಕ್ಕೆ ಏರಿಕೆಯಾಗುತ್ತದೆ. ಬಹುಮತ ಸಾಬೀತುಪಡಿಸಲು 9 ಸದಸ್ಯರು ಸಾಕಾಗಿರುವುದರಿಂದ ಬಿಜೆಪಿಗೆ ಅಧಿಕಾರ ಬಹುಮತ ಖಚಿತವಾಗಿದೆ.

ಕುಮಾರಸ್ವಾಮಿಗೆ ಕರೆ:ಪಟ್ಟಣ ಪಂಚಾಯಿತಿ ಅಧಿಕಾರಕ್ಕಾಗಿ ಜೆಡಿಎಸ್‌‌ನಿಂದ ಆಯ್ಕೆಯಾಗಿರುವ ಮೂವರು ಸದಸ್ಯರ ಬೆಂಬಲ ಕೋರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಚಿವ ಮಾಧುಸ್ವಾಮಿ ದೂರವಾಣಿ ಸಂಪರ್ಕ ಮಾಡಿದ್ದಾರೆ ಎಂಬ ವದಂತಿ
ಹರಡಿತ್ತು. ಇದಕ್ಕೆ ಇಂಬು ನೀಡುವಂತೆ ಮಾಜಿ ಶಾಸಕ ಸಿ.ಬಿ. ಸುರೇಶ್‌ಬಾಬು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಧ್ಯಕ್ಷ –ಉಪಾಧ್ಯಕ್ಷರ ಅಧಿಕಾರ ವಿಷಯದಲ್ಲಿ ಜೆಡಿಎಸ್‌ ವರಿಷ್ಠರ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದರು. ಅಲ್ಲದೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಹೋಗುವುದು ಸರಿ ಎನ್ನುವ ಮಾತನಾಡಿದ್ದರು. ಒಟ್ಟಾರೆ ಅಂತೆಕಂತೆಗಳ ನಡುವೆ ಬಿಜೆಪಿ ಮ್ಯಾಜಿಕ್‌ ನಂಬರ್‌ ಗಳಿಸಿ ಬೀಗಿದೆ. ಕೊನೆ ಗಳಿಗೆಯಲ್ಲಿ ಇನ್ನಾವ ಪ್ರಹಸನ ನಡೆಯುವುದು ಎನ್ನುವುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.