ತುಮಕೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರಕ್ಕೆ ನಿರಂತರ ಕಿರುಕುಳ ನೀಡುತ್ತ ಬಂದ ಬಿಜೆಪಿಯು ಕುದುರೆ ವ್ಯಾಪಾರದ ಮೂಲಕ ಸರ್ಕಾರವನ್ನು ಕೆಡವಲು ಮುಂದಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಅಂಜನಪ್ಪ ಮಾತನಾಡಿ, ‘ಪ್ರಜಾಪ್ರಭುತ್ವದ ನಿಯಮದ ಪ್ರಕಾರ ಅಧಿಕಾರದಲ್ಲಿರುವ ಸರ್ಕಾರವನ್ನು ಕೆಡವಲು ಬಿಜೆಪಿ ಪಕ್ಷ ಅಪರೇಷನ್ ಕಮಲದಂತಹ ಕೃತ್ಯಕ್ಕೆ ಇಳಿದಿರುವುದು ನಾಚಿಕೇಗೇಡಿನ ವಿಚಾರ’ ಎಂದು ಟೀಕಿಸಿದರು.
ಬಿಜೆಪಿ ನಡೆಸುತ್ತಿರುವ ಕೃತ್ಯ ಪ್ರಜಾಪ್ರಭುತ್ವದ ಕಗ್ಗೊಲೆ. ಇದರ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸಬೇಕಿದೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಸರ್ಕಾರದದ ನೆರವಿನೊಂದಿಗೆ ಐ.ಟಿ., ಇಡಿ ಗಳಂತಹ ಸಂವಿಧಾನಾತ್ಮಕ ಸಂಸ್ಥೆಗಳ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸುವುದು, ಅವರಿಗೆ ಬೆದರಿಕೆ ತಂತ್ರವೊಡ್ಡಿಕೊಂಡು ಬಂದಿದೆ. ಅಧಿಕಾರಕ್ಕಾಗಿ 7 ಬಾರಿ ಮೈತ್ರಿ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸಿದೆ ಎಂದು ಆರೋಪಿಸಿದರು.
ಪದೇ ಪದೇ ಇದೇ ಈ ರೀತಿಯ ಪ್ರಯತ್ನ ಮುಂದುವರೆದರೆ ದೇಶದಾದ್ಯಂತ ಜೆಡಿಎಸ್ ಮತ್ತು ಇತರೆ ಪಕ್ಷಗಳು ಬಿಜೆಪಿ ವಿರುದ್ದ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡರಾದ ಹಾಲನೂರು ಆನಂತ್, ಹಿರೇಹಳ್ಳಿ ಮಹೇಶ್,ಮಹಾಲಿಂಗಪ್ಪ, ಜಹಂಗೀರ್ ರವಿ, ಬೆಳ್ಳಿ ಲೋಕೇಶ್,ಪಾಲಿಕೆ ಸದಸ್ಯರಾದ ಮಂಜುನಾಥಗೌಡ, ಧರಣೇಂದ್ರಕುಮಾರ್, ನರಸೇಗೌಡ, ಭೈರೇಗೌಡ, ಗಂಗಣ್ಣ, ಲೀಲಾವತಿ, ತಹೀರಾಭಾನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮುಖಂಡರಾದ ಕೆಂಪರಾಜು, ಕಾಮೇಗೌಡ,ಸೋಲಾರ ಕೃಷ್ಣಮೂರ್ತಿ, ಉಮೇಶ್, ವಿಷ್ಣುವರ್ಧನ್, ಗಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.