
ತುಮಕೂರು: ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಒತ್ತಾಯಿಸಿ 6 ತಿಂಗಳಿನಿಂದ ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯನ್ನು ಮತ್ತೆ ಶಾಲೆಗೆ ಕರೆತರುವ ಕಾರ್ಯ ಯಶಸ್ವಿಯಾಗಿದೆ.
4ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಶಾಲೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹಾಗೂ ಅಧಿಕಾರಿಗಳ ತಂಡ ಸೋಮವಾರ ಬಾಲಕಿ ಮನೆಗೆ ಭೇಟಿ ನೀಡಿ ಅಹವಾಲು ಆಲಿಸಿತು.
‘ನನ್ನ ಶಾಲೆಗೆ ಭದ್ರತೆ ಬೇಕು. ಶಾಲಾ ಮೈದಾನದಲ್ಲಿ ಓಡಾಡುವ ವಾಹನಗಳಿಂದ ಕಿರಿಕಿರಿಯಾಗುತ್ತಿದೆ. ಕಾಂಪೌಂಡ್ ನಿರ್ಮಿಸಬೇಕು’ ಎಂದು ಸಿಮ್ರಾ ಮನವಿ ಮಾಡಿದರು. ‘ಶೀಘ್ರದಲ್ಲಿಯೇ ಕಾಂಪೌಂಡ್ ನಿರ್ಮಿಸಲಾಗುವುದು’ ಎಂದು ನೂರುನ್ನೀಸಾ ಭರವಸೆ ನೀಡಿದರು. ವಿದ್ಯಾರ್ಥಿನಿಯನ್ನು ಅವರ ಜತೆಯಲ್ಲಿಯೇ ಶಾಲೆಗೆ ಕರೆದುಕೊಂಡು ಬಂದರು.
ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ರಾಜಸ್ವ ನಿರೀಕ್ಷಕ ಅರುಣ್ಕುಮಾರ್, ಗ್ರಾಮ ಆಡಳಿತಾಧಿಕಾರಿ ಅನಿಲ್, ಕಾಳಜಿ ಫೌಂಡೇಷನ್ನ ಶಿವಕುಮಾರ್ ಮೇಷ್ಟ್ರುಮನೆ, ಗಣೇಶ್ ಮಾರನಹಳ್ಳಿ, ರಫಿಪಾಷ, ಮುಖಂಡರಾದ ಅಯ್ಯನಪಾಳ್ಯ ಶ್ರೀನಿವಾಸ್, ಮಹಾಲಿಂಗಯ್ಯ, ಡಮರುಗ ಉಮೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.