ತುಮಕೂರು: ‘ಮೌನದ ಮೂಲಕ ಜಗತ್ತನ್ನು ಅರ್ಥೈಸಿಕೊಂಡು, ಸಮುದಾಯದ ಸಂಕಟಗಳಿಗೆ ಪರಿಹಾರ ಹುಡುಕಿದ ಬುದ್ಧ, ಎದೆಯ ಕತ್ತಲಿಗೆ ಬೆಳಕಿನ ರೂಪ ಕೊಟ್ಟ ದಾರ್ಶನಿಕ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯದಲ್ಲಿ ಸೋಮ ವಾರ ಬುದ್ಧ ಪೂರ್ಣಿಮೆ ಪ್ರಯುಕ್ತ ಹಮ್ಮಿ ಕೊಂಡಿದ್ದ ‘ಬುದ್ಧ ಮತ್ತು ಸಮಕಾಲೀನ ಸಂದರ್ಭ’ ಕುರಿತು ಉಪನ್ಯಾಸ ನೀಡಿ, ‘ಬುದ್ಧ ದೇವರೂ ಅಲ್ಲ, ಬೋಧಿಸಿದ್ದು ಧರ್ಮವೂ ಅಲ್ಲ. ಭಾರತದ ಎಲ್ಲಾ ವಿಚಾರವಾದಿಗಳು ಬುದ್ಧನ ಬೆಳಕಿನ ಜೊತೆಗೆ ಬಂದವರು’ ಎಂದರು.
ಅಗೋಚರ ಶಕ್ತಿಗಳ ಬಗ್ಗೆ ಮಾತನಾಡುವವರಿಂದ ಬದುಕಿನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನಮ್ಮನ್ನು ನಾವು ಅರ್ಥೈಸಿಕೊಳ್ಳುವ ಕ್ರಮವನ್ನು ಅಳವಡಿಸಿ ಕೊಂಡಾಗ ಕಣ್ಣೊಳಗಿನ ಕತ್ತಲೆಗೆ ಬೆಳಕು ಮೂಡುತ್ತದೆ. ಸ್ವಂತಿಕೆ ಕಳೆದು ಕೊಂಡಿರುವ ನಮಗೆ ಬುದ್ಧನ ಬೆಳಕು ಬೇಕು ಎಂದು ತಿಳಿಸಿದರು.
ವಿ.ವಿ ಸಿಂಡಿಕೇಟ್ ಸದಸ್ಯ ಟಿ.ಡಿ. ವಿನಯ್, ‘ಬುದ್ಧ ವಿಶ್ವಕ್ಕೆ ಬೆಳಕಾಗಿದ್ದಾನೆ. ನಮ್ಮ ನಡುವೆ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡುವುದರ ಮೂಲಕ ಬುದ್ಧನನ್ನು ಕಾಣಬೇಕಿದೆ. ಬುದ್ಧನೆಂದರೆ ಪ್ರಶ್ನೆಗೆ ಬರೆಯುವ ಉತ್ತರವಾಗಬಾರದು, ನಮ್ಮೊಳಗಿನ ಪ್ರಜ್ಞೆಯಾಗಬೇಕು’ ಎಂದರು.
ಶಿರಾ ತಹಶೀಲ್ದಾರ್ ಮಮತಾ, ‘ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟ ತತ್ವಜ್ಞಾನಿಗಳುನಮ್ಮ ಮುಂದಿದ್ದಾರೆ. ಅದರಲ್ಲಿ ಬುದ್ಧನೂ ಒಬ್ಬ. ಅವರ ತತ್ವಾದರ್ಶಗಳಲ್ಲಿ ಒಂದಂಶವನ್ನಾದರೂ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ವಿ.ವಿಯ ಪ್ರಭಾರ ಕುಲಪತಿ ಪ್ರೊ.ಕೇಶವ, ಕುಲಸಚಿವ ಪ್ರೊ.ಕೆ. ಶಿವಚಿತ್ತಪ್ಪ, ಗೌತಮ ಬುದ್ಧ ಅಧ್ಯಯನ ಪೀಠದ ಸಂಚಾಲಕ ನಾಗಭೂಷಣ ಬಗ್ಗನಡು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.