ADVERTISEMENT

ಜನತೆಯ ನಿರೀಕ್ಷೆ ಹೆಚ್ಚಿಸಿದ ಬಜೆಟ್: ಶಿರಾಕ್ಕೆ ಸಿಗುವುದೇ ಹೆಚ್ಚು ಅನುದಾನ

ಎಚ್.ಸಿ.ಅನಂತರಾಮು
Published 16 ಫೆಬ್ರುವರಿ 2025, 6:30 IST
Last Updated 16 ಫೆಬ್ರುವರಿ 2025, 6:30 IST
ಧನಂಜಯಾರಾಧ್ಯ
ಧನಂಜಯಾರಾಧ್ಯ   

ಶಿರಾ: ರಾಜ್ಯ ಬಜೆಟ್ ಬಗ್ಗೆ ತಾಲ್ಲೂಕಿನ ಜನತೆಯ ನಿರೀಕ್ಷೆ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಎಷ್ಟು ಮಹತ್ವ ದೊರೆಯುವುದು ಎನ್ನುವ ಚರ್ಚೆ ನಡೆಯುತ್ತಿದೆ.

ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಕೃಷಿ ಪದವಿ ಕಾಲೇಜು ಪ್ರಾರಂಭದ ಬಗ್ಗೆ ಹಿಂದೆ ಚರ್ಚೆಗಳು ನಡೆದಿದ್ದವು. ಹಿಂದೆ ಟಿ.ಬಿ‌.ಜಯಚಂದ್ರ ಅವರು ಸಚಿವರಾಗಿದ್ದ ಸಮಯದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು ಈ ಬಾರಿ ಬಜೆಟ್‌ನಲ್ಲಿ ಸೇರಿಸಬಹುದು ಎನ್ನುವ ನಿರೀಕ್ಷೆ ಇದೆ.

ದಾವಣಗೆರೆ- ತುಮಕೂರು ರೈಲು ಮಾರ್ಗದ ಕಾಮಗಾರಿ ವಿಳಂಬವಾಗಿದ್ದು ಭೂಸ್ವಾಧೀನ ಕೆಲಸ ನಡೆಯಬೇಕಿದೆ. ಇದಕ್ಕೆ ಅನುದಾನವನ್ನು ನೀಡಿ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.

ADVERTISEMENT

ತಾಲ್ಲೂಕಿಗೆ ಹೇಮಾವತಿ ಜೊತೆಗೆ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ ನೀರು ತರುವ ಮೂಲಕ ತ್ರಿವೇಣಿ ಸಂಗಮ ಮಾಡುವುದಾಗಿ ಕನಸು ಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ಚುರುಕು ಮೂಡಿಸಬೇಕಿದೆ.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಹಿರಿಯ ಶಾಸಕ ಟಿ.ಬಿ‌.ಜಯಚಂದ್ರ ಅವರು ಸಚಿವ ಸ್ಥಾನದಿಂದ ವಂಚಿತರಾಗಿರುವುದರಿಂದ ಅವರನ್ನು ಸಮಾಧಾನ ಮಾಡಲು ಬಜೆಟ್‌ನಲ್ಲಿ ಶಿರಾ ಕ್ಷೇತ್ರಕ್ಕೆ‌ ಹೆಚ್ಚಿನ ಮನ್ನಣೆ ದೊರೆಯವುದೇ ಎನ್ನುವ ನಿರೀಕ್ಷೆ ಜನರಲ್ಲಿ ಮೂಡಿದೆ.

ಶಿರಾ ತಾಲ್ಲೂಕು ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು ಅಂತರ್ಜಲ ವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ ರೈತರ ಒತ್ತಾಯವಾಗಿದೆ. ತಾಲ್ಲೂಕು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು ಶಿಥಿಲವಾಗಿರುವ ಶಾಲಾ ಕಟ್ಟಡಗಳ ನವೀಕರಣಕ್ಕೆ ವಿಶೇಷ ಅನುದಾನ ನೀಡಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.

ಯುವ ಜನತೆಗೆ ಉದ್ಯೋಗ ಸೃಷ್ಟಿಸಲು ಶಿರಾದಲ್ಲಿ ಜವಳಿ ಪಾರ್ಕ್ ಪ್ರಾರಂಭಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಪದೇ ಪದೇ ಹೇಳುತ್ತಿದ್ದು ಈ ಬಜೆಟ್‌ನಲ್ಲಿ ಘೋಷಣೆಯಾಗುವುದೇ ಎಂಬ ಕುತೂಹಲ ಇದೆ.

ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಬಜೆಟ್‌ನ ಒಟ್ಟು ಮೊತ್ತದಲ್ಲಿ ಶೇ 60 ರಷ್ಟುನ್ನು ಕೃಷಿ ಕ್ಷೇತ್ರಕ್ಕೆ ನೀಡಬೇಕು. ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಮೂಲಕ ರೈತರ ಬೆಳೆ ಸಾಲ‌ವನ್ನು ಮನ್ನಾ ಮಾಡಿದರೆ ರೈತರಿಗೆ ಅನುಕೂಲವಾಗುವುದು.

ಧನಂಜಯಾರಾಧ್ಯ, ರೈತ ಸಂಘದ ಜಿಲ್ಲಾಧ್ಯಕ್ಷ 

ಬೆಳೆಗೆ ಪ್ರೋತ್ಸಾಹಧನ ನೀಡಿ

ಶೇಷ ಪ್ಯಾಕೇಜ್ ನೀಡುವ ಜೊತೆಗೆ ಬಯಲು ಸೀಮೆಯಲ್ಲಿ ಬೆಳೆಯುವ ಸಿರಿಧಾನ್ಯ, ಶೇಂಗಾ, ತೊಗರಿ, ಎಣ್ಣೆಕಾಳು ಬೆಳೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿರಿಸಿ ಪ್ರೋತ್ಸಾಹಧನ ನೀಡಿದರೆ ರೈತರಿಗೆ ಅನುಕೂಲ.

ಗಂಗಾಧರ್, ಪಟ್ಟನಾಯಕನಹಳ್ಳಿ

ಯುವಜನತೆಗೆ ಉದ್ಯೋಗ ನೀಡಿ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು. ಸ್ವಯಂ ಉದ್ಯೋಗ ಮಾಡುವ ಯುವಜನತೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಹೆಚ್ಚು ಅನುಕೂಲ.

ಟಿ.ರಾಘವೇಂದ್ರ, ಛಾಯಾಗ್ರಾಹಕ, ಪಟ್ಟನಾಯಕನಹಳ್ಳಿ

ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ

ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಉದ್ಯಮ ಪ್ರಾರಂಭಿಸುವ ಮಹಿಳೆಯರಿಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸಮರ್ಥ ಉದ್ಯಮಿಗಳಾಗಿ ರೂಪಿಸಲು ಬಜೆಟ್‌ನಲ್ಲಿ ವಿಶೇಷ ಯೋಜನೆ ರೂಪಿಸಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ.

ಆರ್.ನಾಗಮ್ಮ ಸುರೇಶ್, ಕಾಮಗೊಂಡನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.