ADVERTISEMENT

‘ಮೀಸಲಾತಿ ರದ್ದು: ಮುಸ್ಲಿಂ ದ್ವೇಷದ ಭಾಗ’

ಅನ್ಯಾಯ ತಡೆಯಲು ಎಲ್ಲರು ಒಂದಾಗುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 16:11 IST
Last Updated 29 ಮಾರ್ಚ್ 2023, 16:11 IST

ತುಮಕೂರು: ಸರ್ಕಾರ ಮುಸ್ಲಿಮರಿಗೆ ಪ್ರವರ್ಗ 2ಬಿ ಮೀಸಲಾತಿ ರದ್ದು ಪಡಿಸಿರುವುದು ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ ಎಂದು ಸಿಪಿಐಎಂ ಆರೋಪಿಸಿದೆ.

ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಾಗಿತ್ತು. ಮೀಸಲಾತಿ ರದ್ದುಗೊಳಿಸಿರುವುದನ್ನು ವಾಪಸ್‌ ಪಡೆದು, ಈ ಹಿಂದಿನಂತೆ ಮೀಸಲಾತಿ ಮುಂದುವರಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌, ಜಿಲ್ಲಾ ಕಾರ್ಯದರ್ಶಿ ಎನ್‌.ಕೆ. ಸುಬ್ರಮಣ್ಯ ಒತ್ತಾಯಿಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್‌ ಒಳಗೊಂಡಂತೆ ಹಿಂದುತ್ವ ಕೋಮುವಾದಿ ಶಕ್ತಿಗಳು ಸರ್ಕಾರದ ಅಧಿಕಾರ ಮತ್ತು ಜನತೆಯ ತೆರಿಗೆ ಹಣವನ್ನು ದುಷ್ಕೃತ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿವೆ. ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಲು ಹೊರಟಿದೆ. ಈ ಸಮುದಾಯಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ, ಅಸಹಿಷ್ಣುತೆ ಬೆಳೆಸುವ ಕುತಂತ್ರ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಸಾಮರಸ್ಯ, ಸೌಹಾರ್ದ ಕದಡುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌ ನಂತಹ ಕೂಟಗಳನ್ನು ಸೋಲಿಸಲು ಎಲ್ಲರು ಒಂದಾಗಬೇಕು. ಸಾರ್ವಜನಿಕ ಶಿಕ್ಷಣದ ಉಳಿಸಿ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ತಡೆಯಬೇಕಿದೆ. ಖಾಲಿ ಹುದ್ದೆಗಳ ಭರ್ತಿ ಮಾಡಿ, ಖಾಸಗಿ ಕ್ಷೇತ್ರಕ್ಕೆ ಮೀಸಲಾತಿ ವಿಸ್ತರಿಸಬೇಕಿದೆ. ಮುಸ್ಲಿಂ ಸಮುದಾಯದ ವಿರುದ್ಧ ನಡೆಯುತ್ತಿರುವ ಅನ್ಯಾಯ ತಡೆಯಲು ಎಲ್ಲರು ಒಂದಾಗುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.