ADVERTISEMENT

ತುಮಕೂರು: ಎಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ

ಅಂತಿಮ ಸಿದ್ಧತೆ; ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 4:34 IST
Last Updated 25 ಡಿಸೆಂಬರ್ 2024, 4:34 IST
ತುಮಕೂರಿನಲ್ಲಿ ಮಂಗಳವಾರ ಮಹಿಳೆಯರು ಕ್ರಿಸ್‌ಮಸ್‌ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಸಿದರು
ತುಮಕೂರಿನಲ್ಲಿ ಮಂಗಳವಾರ ಮಹಿಳೆಯರು ಕ್ರಿಸ್‌ಮಸ್‌ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಸಿದರು   

ತುಮಕೂರು: ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಬುಧವಾರ (ಡಿ.25) ಎಲ್ಲ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಒಂದು ವಾರದಿಂದ ಚರ್ಚ್‌ ಮತ್ತು ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಗರಿಗೆದರಿದೆ. ಚರ್ಚ್‌ಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿದ್ದು, ಹಬ್ಬದ ಸೊಬಗು ಮತ್ತಷ್ಟು ಹೆಚ್ಚಿಸಿದೆ. ಕ್ರಿಸ್‌ಮಸ್‌ ಕೇಕ್‌, ಕ್ರಿಸ್‌ಮಸ್‌ ಸ್ಟಾರ್‌, ಸೆಂಟಾ ಕ್ಲಾಸ್‌ಗೆ ಎಲ್ಲೆಡೆ ಬೇಡಿಕೆ ಸೃಷ್ಟಿಯಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹಬ್ಬದ ಖುಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಹಲವು ದಿನಗಳ ನಿರೀಕ್ಷೆ, ಪ್ರಾರ್ಥನೆ ನೆರವೇರಿದ್ದರ ಸಂಕೇತವೇ ಕ್ರಿಸ್‌ಮಸ್‌’ ಎಂಬ ನಂಬಿಕೆ ಕ್ರೈಸ್ತರಲ್ಲಿದೆ.

ಎಲ್ಲ ಚರ್ಚ್‌ಗಳಲ್ಲಿ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಶಿರಾಗೇಟ್‌ ಬಳಿಯ ಟಾಮ್ಲಿನ್‌ಸನ್‌ ಚರ್ಚ್‌ ಬಳಿ ತೆಂಗಿನ ಗರಿಗಳಿಂದ ತಯಾರಿಸಿದ್ದ ಗೋದಲಿ ಗಮನ ಸೆಳೆಯುತ್ತಿದೆ. ಏಸುಕ್ರಿಸ್ತ ಜನಿಸಿದ, ವಾಸವಿದ್ದ ಸ್ಥಳ ಹೇಗಿತ್ತು ಎನ್ನುವುದನ್ನು ಪರಿಚಯಿಸಲು ಗೋದಲಿ ನಿರ್ಮಿಸಲಾಗಿದೆ. ಗೋದಲಿಯಲ್ಲಿ ಏಸುವಿನ ಚಿತ್ರ ಅಳವಡಿಸಲಾಗಿದೆ. ಕ್ರಿಸ್‌ಮಸ್‌ ಗಿಡ, ಕ್ರಿಸ್‌ಮಸ್‌ ಸ್ಟಾರ್‌, ವಿದ್ಯುತ್‌ ದೀಪ ಹಬ್ಬಕ್ಕೆ ಮೆರುಗು ತಂದುಕೊಟ್ಟಿದೆ.

ADVERTISEMENT

ಸಿಎಸ್‌ಐ ವೆಸ್ಲಿ ಚರ್ಚ್‌ನಲ್ಲಿ ಬೆಳಿಗ್ಗೆ 8.30 ಗಂಟೆಯಿಂದ ಪ್ರಾರ್ಥನೆ ಶುರುವಾಗಲಿದೆ. 175 ವರ್ಷಗಳ ಹಳೆಯದಾದ ಚರ್ಚ್‌ನಲ್ಲಿ ವಿಶೇಷವಾಗಿ ಹಬ್ಬ ಆಚರಿಸಲು ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಚೌಕದಿಂದ ಹಾದು ಹೋಗುವವರನ್ನು ಚರ್ಚ್‌ಗೆ ಹಾಕಿರುವ ವಿದ್ಯುತ್‌ ದೀಪಗಳು ಕೈ ಬೀಸಿ ಕರೆಯುತ್ತಿವೆ.

ಕ್ರೈಸ್ತರ ಮನೆಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಖಾದ್ಯ ತಯಾರಿಸಲಾಗಿದೆ. ಕ್ರಿಸ್‌ಮಸ್‌ ಕೇಕ್‌, ಕಜ್ಜಾಯ, ಕಲ್ಕಲ, ಚಕ್ಲಿ ಮುಂತಾದ ವಿವಿಧ ಬಗೆಯ ತಿಂಡಿ–ತಿನಿಸು ಸಿದ್ಧಪಡಿಸಲಾಗಿದೆ. ಉದ್ಯೋಗ, ವಿದ್ಯಾಭ್ಯಾಸ ಇತರೆ ನಾನಾ ಕಾರಣಗಳಿಂದ ಮನೆಯಿಂದ ದೂರ ಉಳಿದವರು ಹಬ್ಬದ ಆಚರಣೆಗಾಗಿ ಮನೆ ಸೇರಿದ್ದು, ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಿದೆ.

ಏಸುವಿನ ಸ್ಮರಣೆಯೇ ಕ್ರಿಸ್‌ಮಸ್‌

‘ಸೆಂಟಾ ಕ್ಲಾಸ್‌ ಗೋದಲಿ ಇತರೆ ವಿಚಾರಗಳು ಕ್ರಿಸ್‌ಮಸ್‌ನ ಸಾಂಕೇತಿಕ ವಿವರಣೆಯೇ ಹೊರೆತು ಇಷ್ಟೇ ಕ್ರಿಸ್‌ಮಸ್‌ ಅಲ್ಲ. ಜನರ ಕಷ್ಟ–ಕಾರ್ಪಣ್ಯ ಕೊನೆಗಾಣಿಸಲು ಸಂಕಷ್ಟದಲ್ಲಿರುವ ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ಏಸುಕ್ರಿಸ್ತ ಭೂಮಿಗೆ ಬಂದ ದಿನವನ್ನು ಕ್ರಿಸ್‌ಮಸ್‌ ಅಂತಹ ಆಚರಿಸಲಾಗುತ್ತಿದೆ’ ಎಂದು ಸಿಎಸ್‌ಐ ವೆಸ್ಲಿ ಚರ್ಚ್‌ನ ಸಭಾ ಪಾಲಕ ಮಾರ್ಗನ್‌ ಸಂದೇಶ್‌ ಪ್ರತಿಕ್ರಿಯಿಸಿದರು. ಏಸುಕ್ರಿಸ್ತನ ಜನನ ಜೀವನ ಬೋಧನೆ ರಕ್ಷಣಾ ಕಾರ್ಯ ಸ್ಮರಿಸುವುದು ಹಬ್ಬದ ಉದ್ದೇಶ. ಸಮಾಜದ ಶಾಂತಿ ಎಲ್ಲರು ಸಹಬಾಳ್ವೆಯಿಂದ ಜೀವಿಸುವಂತಹ ವಾತಾವರಣ ನಿರ್ಮಿಸುವಂತೆ ಏಸುಕ್ರಿಸ್ತನಲ್ಲಿ ಪ್ರಾರ್ಥಿಸಲಾಗುತ್ತದೆ ಎಂದರು.

ತುಮಕೂರಿನ ಲೂರ್ದು ಮಾತೆ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.