ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಉತ್ತರ ಪಿನಾಕಿನಿ ನದಿಗೆ ನಿರ್ಮಿಸಿರುವ ಚೆಕ್ಡ್ಯಾಂ ತುಂಬಿ ಹರಿಯುತ್ತಿರುವುದನ್ನು ಭಾನುವಾರ ಜನರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ಅಂದ್ರಿನಿವಾ ಯೋಜನೆಯಡಿ ಆಂಧ್ರದ ಪೆರೂರು ಡ್ಯಾಂಗೆ ಉತ್ತರ ಪಿನಾಕಿನಿ ಮೂಲಕ ಆಂಧ್ರ ಪ್ರದೇಶ ನೀರು ಕೊಂಡೊಯ್ಯುತ್ತಿದೆ. ಜೂನ್-2019ರಲ್ಲಿ ಪ್ರಥಮ ಬಾರಿಗೆ ಚೆಕ್ಡ್ಯಾಂಗೆ ಕೃಷ್ಣಾ ನದಿ ನೀರು ಹರಿಸಲಾಗಿತ್ತು. ನಂತರ ಎರಡನೇ ಬಾರಿಗೆ ಆಂಧ್ರ ಸರ್ಕಾರ ನೀರು ಹರಿಸಿದೆ.
ಚೆಕ್ಡ್ಯಾಂ ತುಂಬಿ ನೀರು ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಜನರು ಬರುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ.
ತಿರುಮಣಿ ಪೊಲೀಸರು ಚೆಕ್ಡ್ಯಾಂ ಬಳಿ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.
ಫೆಬ್ರುವರಿ-17ರಂದು ಷಷ್ಠಿ ಪ್ರಯುಕ್ತ ಗ್ರಾಮದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಚೆಕ್ಡ್ಯಾಂ ತುಂಬಿ ನದಿ ಹರಿಯುತ್ತಿರುವುದು ಭಕ್ತರು ಅನುಕೂಲವಾಗಲಿದೆ.
ಚೆಕ್ಡ್ಯಾಂ ತುಂಬಿರುವುದರಿಂದ ಬೇಸಿಗೆಯಲ್ಲಿ ನೀರಿನ ಬವಣೆ ಕಡಿಮೆಯಾಗಲಿದೆ. ಪಟ್ಟಣದ ಅಗಸನಕುಂಟೆಗೆ ನಾಗಲಮಡಿಕೆಯಿಂದ ಪೈಪ್ಲೈನ್ ಮೂಲಕ ನೀರು ಪೂರೈಸುತ್ತಿದ್ದು, ಅಂತರ್ಜಲ ಹೆಚ್ಚಿ ಪಟ್ಟಣದ ಕೊಳವೆ ಬಾವಿಗಳಿಗೂ ಅನುಕೂಲವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.