
ಹುಳಿಯಾರು: ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ₹1,200 ಕೋಟಿ ವೆಚ್ಚದ ವಿವಿಧ ಕೆಲಸಗಳಿಗೆ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಹೋಬಳಿಯ ದೊಡ್ಡಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ‘ಮನೆ ಬಾಗಿಲಿಗೆ ಮನೆಮಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೊಡ್ಡಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ, ಶಾಸಕರ ಕ್ಷೇತ್ರದ ಅಭಿವೃದ್ಧಿ ಅನುದಾನ, ಗಣಿಬಾಧಿತ ಪ್ರದೇಶಾಭಿವೃದ್ಧಿ ಸೇರಿದಂತೆ ಎಲ್ಲ ಅನುದಾನಗಳು ಸೇರಿ ₹276 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿವೆ. ಪೌತಿ ಖಾತೆ ಅಂದೊಲನದ ಮೂಲಕ 15 ದಿನಗಳಲ್ಲಿ ಖಾತೆ ಮಾಡಿಕೊಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಜಿಲ್ಲಾಮಟ್ಟದ ಅಧಿಕಾರಿ ಸಂಗಮೇಶ್ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಯೊಜನೆ, ಗಂಗಕಲ್ಯಾಣ ಯೋಜನೆಗಳನ್ನು ಬಳಸಿಕೊಳ್ಳಿ ಎಂದರು.
ದೊಡ್ಡಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಳೆಕಟ್ಟೆ, ಪೋಚಕಟ್ಟೆ, ದೊಡ್ಡಬಿದರೆ, ಕೋಡಿಹಳ್ಳಿ, ಚಿಕ್ಕಬಿದರೆ, ಕಲ್ಲಹಳ್ಳಿ, ಬೈರಾಪುರ, ಅವಳಗೆರೆ ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ನಿವೇಶನ, ಮನೆ ಮಂಜೂರಾತಿ, ಭೂ ಮಂಜೂರಾತಿ, ಬಿದಿ ದೀಪ ಆಳವಡಿಕೆ, ಶೌಚಾಲಯ, ಬಳ್ಳೆಕಟ್ಟೆ ಬಳಿ ಕೆಎಸ್ಆರ್ಟಿಸಿ ಬಸ್ ನಿಲುಗಡೆ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾದವು.
ದೊಡ್ಡಬಿದರೆ ಗ್ರಾಮದ ಅದ್ಯಕ್ಷೆ ಶಾಲಿನಿ, ತಹಶೀಲ್ದಾರ್ ಎಂ.ಮಮತಾ, ಗ್ರೇಡ್–2 ತಹಶೀಲ್ದಾರ್ ರಂಗನಾಥ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ರಾಜಸ್ವ ನೀರಿಕ್ಷಕರು ಗ್ರಾಮಾಡಾಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.