ADVERTISEMENT

ರೈತರ ಸಾವು: ಸಿಐಟಿಯು ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 6:06 IST
Last Updated 5 ಅಕ್ಟೋಬರ್ 2021, 6:06 IST

ತುಮಕೂರು: ಉತ್ತರ ಪ್ರದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿರುವುದನ್ನು ಸಿಐಟಿಯು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.

‘ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರನಿಂದ ರೈತರ ಮೇಲೆ ಉದ್ದೇಶಪೂರ್ವಕವಾಗಿ ವಾಹನ ಹರಿಸಿ ಕೊಲ್ಲಲಾಗಿದೆ. ಆತ ಮತ್ತು ಆತನ ಸಹಚರರು ನಿರಾಯುಧ ರೈತರ ಮೇಲೆ ಗುಂಡು ಹಾರಿಸಿದ್ದಾರೆ. ಇದು ಆಘಾತಕಾರಿ ಘಟನೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಜಿ.ಕಮಲ, ಖಜಾಂಚಿ ಎ.ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಸಹ ಸ್ಥಳದಲ್ಲಿದ್ದರು. ಹೋರಾಟ ಮಾಡುತ್ತಿರುವ ಕೃಷಿಕರ ಮೇಲೆ ದಾಳಿ ನಡೆಸುವಂತೆ ಆರ್‌ಎಸ್ಎಸ್, ಬಿಜೆಪಿ ತನ್ನ ಕಾರ್ಯಕರ್ತರಿಗೆ ನಿರ್ದೇಶನ ನೀಡಿದೆ. ಆಡಳಿತಾರೂಢ ಬಿಜೆಪಿಯ ಕಾರ್ಪೋರೇಟ್ ಸರ್ಕಾರವು ಎಂತಹದ್ದೇ ಪರಿಸ್ಥಿತಿ ಎದುರಾದರೂ ತಮ್ಮ ಕಾರ್ಪೋರೇಟ್ ಧಣಿಗಳ ಸೇವೆ ಮಾಡಲು ಪರಮಾಸಕ್ತಿ ವಹಿಸಿರುವುದು ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಕೃಷಿ ಕಾನೂನು ರದ್ದುಗೊಳಿಸುವ ಬದಲು, ಫ್ಯಾಸಿಸ್ಟ್ ಆಡಳಿತ ಮುಂದು ವರಿಸಿದೆ. ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಬಿಜೆಪಿ ಸೋಲಿಸಿ’ ಎಂದು ಕಿಸಾನ್ ಪಂಚಾಯತ್ ರ‍್ಯಾಲಿಯಲ್ಲಿ ಘೋಷಿಸಿದೆ. ಇದು ಯೋಗಿ ಆದಿತ್ಯನಾಥ್‌, ಮತ್ತವರ ಬೆಂಬಲಿಗರಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿ ರೈತರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.