ತಿಪಟೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಬಗ್ಗೆ ಕಾಳಜಿ ವಹಿಸದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೊಬ್ಬರಿಗೆ ಕ್ವಿಂಟಲ್ಗೆ ₹ 20,000 ನಿಗದಿಪಡಿಸಿ ನಫೆಡ್ ಮೂಲಕ ಖರೀದಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ. ಮುದ್ದಹನುಮೇಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆಂಗು ಬೆಳೆಗಾರರೂ ಶೋಷಣೆಗೆ ಒಳಗಾಗಿದ್ದಾರೆ. ಯಾವುದೇ ಸರ್ಕಾರ ಬಂದರೂ ತೆಂಗು ಬೆಳೆಗಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಒಂದು ಕ್ವಿಂಟಲ್ ಕೊಬ್ಬರಿ ಬೆಳೆಯಲು ₹ 20,000 ಅಗತ್ಯವಿದೆ ಎಂದು ಕೃಷಿ ತಜ್ಞರು ವೈಜ್ಞಾನಿಕವಾಗಿ ದೃಡಪಡಿಸಿದ್ದಾರೆ. ಕೇವಲ ₹ 9,000 ನಿಗದಿಯಾದರೆ ಕಷ್ಟ. ₹ 20,000 ನಿಗದಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಒಮ್ಮೆ ರೈತ ಕೃಷಿ ನಿಲ್ಲಿಸಿದರೆ ಆಹಾರದ ಅಭಾವ ಹೆಚ್ಚಾಗಿ, ದೇಶದ ಆರ್ಥಿಕತೆ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಸದ್ಯ ಕೊಬ್ಬರಿ ಬೆಲೆ ಬೆಂಬಲ ಬೆಲೆಗಿಂತ ಕುಸಿದಿದ್ದು ಕೂಡಲೇ ನಫೆಡ್ ಪ್ರಾರಂಭಿಸಿ ಖರೀದಿಸಬೇಕು ಎಂದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ರಾಯಸಂದ್ರ ರವಿ, ಮಾಗೇನಹಳ್ಳಿ ಪರಮೇಶ್, ಉಮಾಮಹೇಶ್, ಮಾಜಿ ಜಿ.ಪಂ. ಸದಸ್ಯ ತ್ರಿಯಂಬಕ, ಶ್ರೀಕಾಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.