ADVERTISEMENT

ಗುಬ್ಬಿ: ತೆಂಗಿಗೆ ಬೆಲೆ ಕುಸಿತದೊಂದಿಗೆ ರೋಗ ಬಾಧೆ

ಬೆಳೆಗಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 13:02 IST
Last Updated 9 ಆಗಸ್ಟ್ 2023, 13:02 IST
ಗುಬ್ಬಿಯಲ್ಲಿ ರೋಗದಿಂದಾಗಿ ಒಣಗುತ್ತಿರುವ ತೆಂಗಿನ ಮರಗಳು
ಗುಬ್ಬಿಯಲ್ಲಿ ರೋಗದಿಂದಾಗಿ ಒಣಗುತ್ತಿರುವ ತೆಂಗಿನ ಮರಗಳು   

ಗುಬ್ಬಿ: ಕೊಬ್ಬರಿ ಧಾರಣೆ ಕುಸಿಯುತ್ತಿರುವ ಜೊತೆಗೆ ತೆಂಗಿನ ಮರಗಳಿಗೆ ಹೆಚ್ಚುತ್ತಿರುವ ರೋಗ ಬಾಧೆಯಿಂದ ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‌ ವಿಸ್ತೀರ್ಣದಲ್ಲಿ ತೆಂಗುಬೆಳೆ ಇದ್ದು, ರೈತರು ನೆಮ್ಮದಿ ಬದುಕು ಕಂಡುಕೊಳ್ಳಲು ಸಾಧ್ಯವಾಗಿತ್ತು. ಆದರೆ ಇತ್ತೀಚಿಗೆ ತೆಂಗಿನ ಮರಗಳಿಗೆ ಹೆಚ್ಚುತ್ತಿರುವ ಕಾಂಡ ಸೋರುವಿಕೆ, ಬೇರು ಕೊಳೆಯುವಿಕೆ, ಬಿಳಿನೊಣ, ಕಪ್ಪುನೊಣ ಬಾಧೆ, ಬೂದಿ ರೋಗಗಳಿಂದಾಗಿ ಫಸಲು ಕಡಿಮೆಯಾಗುತ್ತಿದೆ. ಜೊತೆಗೆ ಮರಗಳು ಒಣಗುತ್ತಿವೆ. ಹಲವೆಡೆ ರೈತರು ಮರಗಳನ್ನೇ ಕಡಿಯಲು ಮುಂದಾಗಿದ್ದಾರೆ.

ತಾಲ್ಲೂಕಿನ ತೆಂಗಿನ ರೋಗದ ಸಮಸ್ಯೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನದಲ್ಲಿ ಇದ್ದರೂ ರೈತರನ್ನು ಸಂಪರ್ಕಿಸಿ ಮರಗಳಿಗೆ ಸೂಕ್ತ ಆರೈಕೆ ಹಾಗೂ ಪರಿಹಾರ ಒದಗಿಸಲು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಕ್ಷೇತ್ರ ವೀಕ್ಷಣೆ ಮಾಡಿ ರೈತರಿಗೆ ಅಗತ್ಯ ಪರಿಹಾರ ಒದಗಿಸಬಹುದಾಗಿದ್ದ ಇಲಾಖೆ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡದಿರುವುದರಿಂದ ರೈತರು ಯಾರ ಬಳಿ ದೂರು ನೀಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ರೈತ ಕೆಂಪರಾಜು.

ಬೆಳೆ ಹಾಗೂ ಬೆಲೆ ಕಡಿಮೆಯಾಗುತ್ತಿರುವುದರಿಂದ ಉಳುಮೆ, ತೆಂಗಿನಕಾಯಿ ಕೀಳುವುದು, ಕೊಬ್ಬರಿ ಸುಲಿಯುವುದು ಹಾಗೂ ಒಡೆಯುವ ಖರ್ಚು ಅಧಿಕವಾಗಿ ರೈತರು ಯಾವುದೇ ಆದಾಯವನ್ನು ತೆಂಗಿನಿಂದ ಈ ಬಾರಿ ಕಾಣಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ರೈತ ಮಹಾಲಿಂಗಪ್ಪ.

ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ರೈತರ ಸಹಾಯಕ್ಕೆ ನಿಲ್ಲಬೇಕು ಎನ್ನುತ್ತಾರೆ ರೈತ ಸಂಘದ ಲೋಕೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.