ತುಮಕೂರು: ಮಹಾನಗರ ಪಾಲಿಕೆಗೆ ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯಲು ಬಂದ ವ್ಯಕ್ತಿಗೆ ದಿಕ್ಕು ತಪ್ಪಿಸಿ ವಂಚನೆ ಮಾಡಿದ ಸಿದ್ಧಲಿಂಗಯ್ಯ ಎಂಬ ಮಧ್ಯವರ್ತಿ ವಿರುದ್ಧ ಮಹಾನಗರ ಪಾಲಿಕೆಯು ತಿಲಕ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಕರಣ ಹಿನ್ನೆಲೆ: ಜಗದೀಶ್ ಎಂಬುವರು ಏ.2ರಂದು ತಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಲು ಪಾಲಿಕೆಗೆ ಬಂದಿದ್ದರು. ಈ ವೇಳೆ ಮಧ್ಯವರ್ತಿ ಸಿದ್ಧಲಿಂಗಯ್ಯ ಎಂಬ ವ್ಯಕ್ತಿ ಅವರಿಗೆ ದಾರಿ ತಪ್ಪಿಸಿದ್ದಾರೆ. 2014ರ ಫೆ.12ರಂದು ಪ್ರಗತಿ ಆಸ್ಪತ್ರೆಯಲ್ಲಿ ಜನನವಾಗಿದ್ದು, ಮಹಾನಗರ ಪಾಲಿಕೆ ದಾಖಲೆಯಲ್ಲೂ ನೋಂದಣಿಯಾಗಿದೆ. ಆದರೆ, ಮಧ್ಯವರ್ತಿ ಸಿದ್ಧಲಿಂಗಯ್ಯ ಈ ಜನನ ದಿನಾಂಕ ಬೇಡ. ನಿಮಗೆ ಬೇಕಾದಂತಹ ಜನನ ದಿನಾಂಕ ಮಾಡಿಸಿಕೊಡುತ್ತೇನೆ ಎಂದು ದಿಕ್ಕು ತಪ್ಪಿಸಿದ್ದಾನೆ.
ಅಲ್ಲದೇ 2014ರ ಆ.1ರಂದು ಮನೆಯಲ್ಲಿಯೇ ಜನನವಾಗಿದ್ದು, ನೋಂದಣಿ ಮಾಡಸಿರಲಿಲ್ಲ. ಹೀಗಾಗಿ ಜನನ ಪ್ರಮಾಣ ಪತ್ರ ಇಲ್ಲ. ಈಗ ಜನನ ಪ್ರಮಾಣ ಪ್ರಮಾಣ ಪತ್ರ ದೊರಕಿಸಬೇಕು ಎಂಬ ಸುಳ್ಳು ಹೇಳಿ ಅರ್ಜಿಯನ್ನೂ ತಾನೇ ಬರೆದುಕೊಟ್ಟು ಅರ್ಜಿದಾರರಿಂದ ಸಹಿ ಹಾಕಿಸಿದ್ದ.
ಅರ್ಜಿ ಕುರಿತು ಅನುಮಾನಗೊಂಡ ಮಹಾನಗರ ಪಾಲಿಕೆಯ ಜನನ ವಿಭಾಗದ ಅಧಿಕಾರಿಗಳು ಅರ್ಜಿದಾರ ಜಗದೀಶ್ ಅವರನ್ನು ಕರೆಸಿ ಕೇಳಿದಾಗ ಸಿದ್ಧಲಿಂಗಯ್ಯ ಎಂಬುವವರು ನಮಗೆ ತಪ್ಪು ಮಾಹಿತಿ ನೀಡಿದ್ದರಿಂದ ಪಾಲಿಕೆ ಕಚೇರಿಗೆ ಜನನ ಪ್ರಮಾಣ ಪತ್ರ ಕೋರಿಕೆ ಪತ್ರ ಸಲ್ಲಿಸಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಪಾಲಿಕೆಯು ಮಧ್ಯವರ್ತಿ ಸಿದ್ಧಲಿಂಗಯ್ಯನ ವಿರುದ್ಧ ತಿಲಕ್ ಪಾರ್ಕ್ ಠಾಣೆಗೆ ದೂರು ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.