ತುಮಕೂರು: ಪ್ರತಿ ಕುಟುಂಬಕ್ಕೂ ₹7,500 ನಗದು ವರ್ಗಾವಣೆ, ಉಚಿತ ಪಡಿತರ, ಉದ್ಯೋಗ ಖಾತ್ರಿ ದಿನ ಗಳನ್ನು ಹೆಚ್ಚಿಸುವುದು, ಕಾರ್ಮಿಕ ಕಾನೂನುಗಳರದ್ದತಿ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ, ‘ಜನವರಿಯಲ್ಲಿ ಕೊರೊನಾ ಸೋಂಕು ಕಂಡು ಬಂದರೂ ಕೇಂದ್ರ ಸರ್ಕಾರ ತಡವಾಗಿ ಕ್ರಮಗಳನ್ನು ಕೈಗೊಂಡ ಪರಿಣಾಮ ಅಸಂಘಟಿತ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು, ಕೃಷಿಕರು, ಜನಸಾಮಾನ್ಯರು, ಬಡಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಯಿತು. ಎಲ್ಲ ವರ್ಗಕ್ಕೂ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡ ಬಿ.ಉಮೇಶ್, ‘ರೈತರು ಸಾಲಮಾಡಿ ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ಜಮೀನಿನಲ್ಲೇ ಕೊಳೆಯಲು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಪ್ಪೊತ್ತಿನ ಗಂಜಿಗಾಗಿ ಪರದಾಡುವಂತಹ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದರು.
ಸಿಪಿಎಂ ನಗರ ಸಮಿತಿ ಸದಸ್ಯ ಷಣ್ಮುಖಪ್ಪ, ಸಿ.ಅಜ್ಜಪ್ಪ, ರಂಗಧಾಮಯ್ಯ, ಶಂಕರಪ್ಪ, ಖಲೀಲ್, ವಸೀಂ, ಉಬೇದುಲ್ಲ, ಗೋವಿಂದರಾಜು, ಇಬ್ರಾಹಿಂ, ಎಸ್.ರಾಘವೇಂದ್ರ, ಷಹತಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.