ಕುಣಿಗಲ್: ಪಟ್ಟಣದ ಬಸ್ ನಿಲ್ದಾಣದಲ್ಲಿನ ಆಟೊ ನಿಲ್ದಾಣದ ಚಾಲಕರ ವರ್ತನೆ ಖಂಡಿಸಿ, ಸಾರ್ವಜನಿಕರು ಆಟೊ ನಿಲ್ದಾಣವನ್ನು ಬಂದ್ ಮಾಡಿದ ಘಟನೆ ಗುರುವಾರ ನಡೆಯಿತು.
ಆಟೊ ನಿಲ್ದಾಣದಲ್ಲಿ ಆಟೊಗಳು ಸಾಲಿನಲ್ಲಿ ನಿಂತಿರುತ್ತವೆ. ಆದರೆ ಕಳೆದ ಹಲವು ತಿಂಗಳಿನಿಂದ ಚಾಲಕರು ಸ್ಥಳೀಯ ಬಾಡಿಗೆಗೆ ಹೋಗದೆ, ದೂರದ ಬಾಡಿಗೆಯನ್ನು ಮಾತ್ರ ಒಪ್ಪಿಕೊಂಡು ದುಬಾರಿ ಹಣ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಬುಧವಾರ ಸಂಜೆ ಕೋಟೆ ಪ್ರದೇಶದ ಮಹಿಳೆ ಮತ್ತು ಯುವಕನ ಆರೋಗ್ಯದಲ್ಲಿ ವ್ಯತ್ಯಯವಾದಾಗ ಸ್ಥಳೀಯ ಆಸ್ಪತ್ರೆಗೆ ಬಾಡಿಗೆಗೆ ಬರುವಂತೆ ಸಂಬಂಧಿಕರು ಗೋಗೆರದರೂ ಆಟೊ ಚಾಲಕರು ನಿರಾಕರಿಸಿದ್ದರು. ನಂತರ ದ್ವಿಚಕ್ರ ವಾಹನದಲ್ಲಿಯೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಒಂದೊಮ್ಮೆ ಸ್ಥಳೀಯ ಬಾಡಿಗೆಗೆ ಹೋದಾಗಲು ದುಪ್ಪಟ್ಟು ಬಾಡಿಗೆ ಪಡೆದು ದಬ್ಬಾಳಿಕೆ ನಡೆಸಿದ್ದಾರೆ ಎಂದು ಜನರು ದೂರಿದ್ದಾರೆ.
ಆಟೊ ಚಾಲಕರ ವರ್ತನೆ ಖಂಡಿಸಿದ ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸೇರಿದಂತೆ ಕೆಲವರು ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಬಂದು ವಿಚಾರಿಸಿದ್ದಾರೆ. ಆಗ ಪರ-ವಿರೋಧ ಚರ್ಚೆಗಳು ನಡೆದು ಕೆಲವರು ಚಾಲಕರ ಮೇಲೆ ಹಲ್ಲೆ ನಡೆಸಿದ್ದರು.
ಪರಿಸ್ಥಿತಿ ನಿಯಂತ್ರಿಸಿದ ಮುಖಂಡರು, ಸ್ಥಳೀಯರ ಸಮಸ್ಯೆಗೆ ಸ್ಪಂದಿಸದ ಆಟೊ ನಿಲ್ದಾಣದ ಅಗತ್ಯವಿಲ್ಲ ಎಂದು ಹೇಳಿ ಆಟೊ ನಿಲ್ದಾಣ ಸ್ಥಗಿತಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.