
ತುಮಕೂರು: ನಮಗೆ ಬಡವರು, ರೈತರ ಬಗ್ಗೆ ಕಾಳಜಿ ಇದೆ. ಕಾಂಗ್ರೆಸ್ ನಾಯಕರಂತೆ ಸುಳ್ಳು ಆಶ್ವಾಸನೆ ಕೊಡುತ್ತಾ ಕಾಲಹರಣ ಮಾಡಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಊರ್ಡಿಗೆರೆಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸೋನಿಯಾ ಗಾಂಧಿ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು. ಅದನ್ನು ಇಲ್ಲ ಎನ್ನುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿಗೆ ಬರುವ ಉದ್ದೇಶ ಇರಲಿಲ್ಲ. ಕಾಂಗ್ರೆಸ್ನವರು ಕರೆತಂದು ಸೋಲಿಸಿದರು. ರಾಜಕೀಯದಲ್ಲಿ ಯಾರನ್ನೂ ನಂಬುವುದಿಲ್ಲ ಎಂದರು.
ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಯಾರೂ ಮಾರು ಹೋಗಬೇಡಿ. ಈ ದೇಶ ಆಳುವ ಶಕ್ತಿ ಕೇವಲ ಮೋದಿಗೆ ಮಾತ್ರ ಇದೆ. ಸೋಮಣ್ಣ ಅವರಿಗೆ ಮತ ಚಲಾಯಿಸಿ, ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಶಾಸಕ ಬಿ.ಸುರೇಶ್ಗೌಡ, ‘ಸೋಮಣ್ಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ₹60 ಕೋಟಿ ಖರ್ಚು ಮಾಡಿ, ನನ್ನ ವಿರುದ್ಧ ಸ್ಪರ್ಧಿಸಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಅಂದು ಚುನಾವಣಾ ಆಯೋಗ ಇರಲಿಲ್ಲವೇ? ಆಗ ದೂರು ಕೊಡದೆ ಈಗ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
ಅಭ್ಯರ್ಥಿ ವಿ.ಸೋಮಣ್ಣ, ಭಾರತೀಯರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಆವರನ್ನು ಬೆಂಬಲಿಸಿದ್ದಾರೆ. ‘ಸೋಮಣ್ಣ ನನ್ನ ಮೇಲೆ ₹60 ಕೋಟಿ ಖರ್ಚು ಮಾಡಿ ಸೋತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಮಾಡಿರುವ ಖರ್ಚಿನ ಬಗ್ಗೆ ನನಗೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಶಾಸಕ ಕೆ.ಗೋಪಾಲಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ನಿಂಗಪ್ಪ, ನೆ.ಲ.ನರೇಂದ್ರಬಾಬು, ವೈ.ಎ.ನಾರಾಯಣಸ್ವಾಮಿ, ಲಕ್ಷ್ಮಿಶ್, ಅನ್ನದಾನಪ್ಪ, ತಿಪ್ಪೇಸ್ವಾಮಿ, ಹುಚ್ಚಯ್ಯ, ದೇವರಾಜು, ಗೂಳೂರು ಶಿವಕುಮಾರ್, ಲಕ್ಷ್ಮಿನಾರಾಯಣ್, ಯಶೋದಮ್ಮ, ಅನ್ನಪೂರ್ಣ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.