ತುಮಕೂರು: ನಗರದ ಶಿರಾ ಗೇಟ್ ಬಳಿಯ ವಾಸವಿ ನಗರದ 4ನೇ ಕ್ರಾಸ್ನ ಮನೆಗಳಿಗೆ ಕಳೆದ ಎರಡು ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಭಾಗದ ಸಾರ್ವಜನಿಕರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಂಬಂಧಪಟ್ಟ ಎಂಜಿನಿಯರ್ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸಿಲ್ಲ.
ಅಧಿಕಾರಿಗಳು ‘ನಮಗೆ ಗೊತ್ತಿಲ್ಲ’ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗಿ ಹರಡುವಿಕೆ ತಡೆಗೆ ಹತ್ತಾರು ಕ್ರಮ ಕೈಗೊಂಡರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇಂತಹ ಸಮಯದಲ್ಲಿ ಶುದ್ಧ ನೀರು ಪೂರೈಸಬೇಕಾದ ಅಧಿಕಾರಿಗಳು ಜನರ ಬದುಕಿನ ಜತೆ ಆಟ ಆಡುತ್ತಿದ್ದಾರೆ ಎಂದು ವಾಸವಿ ನಗರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
‘ಯಾರಿಗೆ ಹೇಳಿದರೂ ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಸಮಸ್ಯೆ ಸರಿಪಡಿಸುವ ಮಾತುಗಳೇ ಬರುತ್ತಿಲ್ಲ’ ಎಂದು ಈ ಭಾಗದ ಗುಂಡಪ್ಪ ದೂರಿದರು.
ಇದೇ ತಿಂಗಳು ಎರಡನೇ ವಾರದಲ್ಲಿ ವಿಜಯನಗರ ಪ್ರದೇಶದ ಮನೆಗಳಿಗೆ ಕಲುಷಿತ ನೀರು ಸರಬರಾಜು ಮಾಡಲಾಗಿತ್ತು. ಮನೆಯ ಸಂಪ್ಗಳಲ್ಲಿ ಚರಂಡಿ ನೀರು ಸಂಗ್ರಹವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.