ಕುಣಿಗಲ್: ‘ಜನರಿಗೆ ಕೊರೊನಾ ಸೋಂಕಿನ ಅರಿವು ಮೂಡಿಸುತ್ತಲೇ ನನಗೆ ಸೋಂಕು ತಗುಲಿದಾಗ ಆತಂಕವಾಗಿತ್ತು. ಆದರೆ ಆತ್ಮಸ್ಥೈರ್ಯ, ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಶೀಘ್ರ ಕೋವಿಡ್ ಜಯಿಸಬಹುದು’ ಎನ್ನುತ್ತಾರೆ ಸೋಂಕಿನಿಂದ ಗುಣಮುಖರಾಗಿರುವ ಗುಲ್ಜಾರ್.
ಅಂಗನವಾಡಿ ಕಾರ್ಯಕರ್ತೆಯಾಗಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದ ಗುಲ್ಜಾರ್ ಅವರಿಗೆ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ವಿಧಾನದಲ್ಲಿ ಅಸಮಾಧಾನ ಇದೆ.
‘ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ಅಥವಾ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವ ವ್ಯವಸ್ಥೆ ಅವೈಜ್ಞಾನಿಕ ಮತ್ತು ಅಮಾನವೀಯವಾಗಿದೆ. ಇದು ಬದಲಾಗಬೇಕು. ಕೋವಿಡ್ ಪರೀಕ್ಷಾ ವರದಿ ಬಂದ ಕೆಲ ಸಮಯಕ್ಕೆ ಪೊಲೀಸರೊಂದಿಗೆ ಆಂಬುಲೆನ್ಸ್ನಲ್ಲಿ ಬರುವ ಸಿಬ್ಬಂದಿ, ಸೋಂಕಿತ ಮತ್ತು ಕುಟುಂಬಕ್ಕೆ ಸೂಕ್ತ ಮಾಹಿತಿ ಮತ್ತು ಆತ್ಮಸ್ಥೈರ್ಯ ತುಂಬದೆ, ಕೈದಿಗಳಂತೆ ಕರೆದೊಯ್ಯುತ್ತಾರೆ’ ಎನ್ನುವುದು ಅವರ ಅನುಭವದ ನುಡಿ.
ಸೋಂಕಿತರನ್ನು ಆಸ್ಪತ್ರೆಗೆ ಕೊಂಡೊಯ್ಯುವರು. ಆ ಮನೆಯಲ್ಲಿ ಯಾರೂ ಇರುವುದಿಲ್ಲ. ಹೀಗಿದ್ದರೂ ಆ ಮನೆ ಪ್ರದೇಶವನ್ನು ಸೀಲ್ಡೌನ್ ಮಾಡುತ್ತಾರೆ. ಇದರಿಂದ ಸೋಂಕಿತರ ಕುಟುಂಬ ಮತ್ತು ಸುತ್ತಲಿನ ಜನರು ಭಯ ಪಡುತ್ತಾರೆ. ಈ ಪದ್ಧತಿ ಬದಲಾಗಬೇಕು. ಇದು ಸೋಂಕಿತರ ಆತ್ಮಸ್ಥೈರ್ಯ ಕುಗ್ಗಿಸುತ್ತದೆ. ದೃಶ್ಯ ಮಾಧ್ಯಮಗಳು ಅತಿರಂಜಿತ ಸುದ್ದಿಯಿಂದ ಸೋಂಕಿತರು ಭಯಪಡುವಂತೆ ಮಾಡುತ್ತಾರೆ. ಆದರೆ ಇದು ಅಷ್ಟೇನು ಅಪಾಯಕಾರಿ ರೋಗವಲ್ಲ ಎನ್ನುತ್ತಾರೆ ಗುಲ್ಜಾರ್.
ಕೋವಿಡ್ಗೆ ಭಯಪಡುವ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿ ಇದ್ದವರು ಶೀಘ್ರ ಗುಣಮುಖರಾಗುತ್ತಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.