ತುಮಕೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರು ಹಾಗೂ ಸೋಂಕಿಗೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊರೊನಾದಿಂದ ಬಳಲುತ್ತಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಮತ್ತೆ ಮೃತಪಟ್ಟಿದ್ದಾರೆ.
ಕಳೆದ ಮೂರು ದಿನಗಳಲ್ಲಿ 8 ಜನರು ಮೃತಪಟ್ಟಿದ್ದಾರೆ. ಸೋಮವಾರ ಒಂದೇ ದಿನ 78 ಮಂದಿಗೆ ಸೋಂಕು ತಗುಲಿದೆ. ಇಲ್ಲಿಯವರೆಗೂ ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದವು. ಸೋಮವಾರ ಕುಣಿಗಲ್ನಲ್ಲಿ ಹೆಚ್ಚಿದೆ.
ಕುಣಿಗಲ್ ಪಟ್ಟಣದ 40 ವರ್ಷದ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಜು.19ರಂದು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಸೋಮವಾರ ಮೃತಪಟ್ಟಿದ್ದಾರೆ. ಶಿರಾದ ಜಮೀನಯನಗರದ 60 ವರ್ಷದ ಮಹಿಳೆ ಸಹ ಜು.19ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು ಅವರು ಮೃತಪಟ್ಟಿದ್ದಾರೆ. ಜು.16ರಂದು ಚಿಕಿತ್ಸೆಗೆ ದಾಖಲಾಗಿದ್ದ ತುಮಕೂರಿನ ಕೆ.ಎಚ್.ಬಿ.ಕಾಲೊನಿಯ 59 ಮಹಿಳೆಯೂ ಸಾವನ್ನಪ್ಪಿದ್ದಾರೆ.
53 ಮಂದಿ ಬಿಡುಗಡೆ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 53 ಮಂದಿ ಗುಣಮುಖರಾಗಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಜಿಲ್ಲೆಯಲ್ಲಿ ಇಲ್ಲಿಯವರೆಗೂ 411 ಮಂದಿ ಗುಣಮುಖರಾಗಿದ್ದಾರೆ. 340 ಸಕ್ರಿಯ ಪ್ರಕರಣಗಳು ಇವೆ.
ತಾಲ್ಲೂಕು;ಇಂದಿನ ಸೋಂಕಿತರು (ಜು.20);ಒಟ್ಟು ಸೋಂಕಿತರು;ಮರಣ
ಚಿ.ನಾ.ಹಳ್ಳಿ;4;46;1
ಗುಬ್ಬಿ;1;34;1
ಕೊರಟಗೆರೆ;8;46;1
ಕುಣಿಗಲ್;24;63;2
ಮಧುಗಿರಿ;10;66;1
ಪಾವಗಡ;10;74;1
ಶಿರಾ;6;63;2
ತಿಪಟೂರು;2;27;0
ತುಮಕೂರು;17;333;17
ತುರುವೇಕೆರೆ;1;25;0
ಒಟ್ಟು;78;777;26
**
ನಾಲ್ಕು ಮಕ್ಕಳಿಗೆ ಸೋಂಕು
ಸೋಮವಾರ ಸೋಂಕು ದೃಢವಾದ 78 ಮಂದಿಯಲ್ಲಿ ಐದು ವರ್ಷದ ಒಳಗಿನ ನಾಲ್ಕು ಮಕ್ಕಳು ಇದ್ದಾರೆ. 60 ವರ್ಷ ಮೇಲ್ಪಟ್ಟ 9 ಮಂದಿಯಲ್ಲಿ ಸೋಂಕು ದೃಢವಾಗಿದೆ. ಪಾವಗಡ ತಾಲ್ಲೂಕಿನಲ್ಲಿ ಜು.19ರಂದು ಮೂರು ತಿಂಗಳ ಮಗುವಿಗೆ ಸೋಂಕು ಕಂಡು ಬಂದಿತ್ತು. ಜಿಲ್ಲೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆಯೂ ಏರುಗತಿಯಲ್ಲಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.