ಹುಳಿಯಾರು: ಸಮೀಪದ ಯಳನಡು ಗ್ರಾಮದ ಕೆರೆಯಲ್ಲಿ ಬಳ್ಳೆಕಟ್ಟೆ ಗ್ರಾಮದ ಖಲೀಲ್ (13) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಯಳನಡು ಗ್ರಾಮದ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ ಆಧಾರ ಗುರುತಿನ ಚೀಟಿ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ತಾಯಿ ಶಾಹೀದಾ ಬೇಗಂ ಅವರೊಂದಿಗೆ ಬಳ್ಳೆಕಟ್ಟೆ ಗ್ರಾಮದಿಂದ ತೆರಳಿದ್ದನು. ಕೆರೆ ಬಳಿ ಈತ ಶೌಚಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಬಹಳ ಹೊತ್ತಾದರೂ ಮಗ ಬರದೇ ಇದ್ದಾಗ ತಾಯಿ ಹುಡುಕಾಟ ನಡೆಸಿದಾಗ ಮಗ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ.
ಖಲೀಲ್ ಹುಳಿಯಾರು ಪಟ್ಟಣದ ಬಸವೇಶ್ವರ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀಪದಲ್ಲಿ ಸೇವೆಗಳಿಲ್ಲ: ಆಧಾರ್ ಕಾರ್ಡ್ ಹೊಸದಾಗಿ ಮಾಡಲು ಅಥವಾ ತಿದ್ದುಪಡಿ ಮಾಡಿಸಲು ಯಳನಡು ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದು ಬಿಟ್ಟರೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಗೆ ಹೋಗಬೇಕು. ಇನ್ನು ಹುಳಿಯಾರು ನಾಡ ಕಚೇರಿಯಲ್ಲಿ ಪ್ರತಿ ಶನಿವಾರ ಸಂಜೆ ವೇಳೆ ಮಾತ್ರ ಈ ಸೇವೆ ಲಭ್ಯವಿದೆ.
ಈಗ ಶಾಲಾ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಅಗತ್ಯತೆ ಇದೆ. ಶಿಕ್ಷಕರು ಮಕ್ಕಳ ಆಧಾರ್ ಕಾರ್ಡ್ ತರಲು ಪೋಷಕರನ್ನು ಕೇಳುತ್ತಿದ್ದಾರೆ. ಇದರಿಂದ ಪೋಷಕರು ಹೊತ್ತಲ್ಲದ ಹೊತ್ತಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಮುಖಂಡ ಇಮ್ರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.