ADVERTISEMENT

ಕೊಲೆ ಪ್ರಕರಣ: 25 ವರ್ಷದ ನಂತರ ಆರೋಪಿ ಬಂಧನ

ಕೊರಟಗೆರೆ ತಾಲ್ಲೂಕು ಕರಕಲ್ಲುಘಟ್ಟ ಗ್ರಾಮ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 14:16 IST
Last Updated 17 ಫೆಬ್ರುವರಿ 2020, 14:16 IST
ಗಾಂಜಾ ಆರೋಪಿಗಳಿಂದ ವಶಕ್ಕೆ ಪಡೆದಿರುವ ವಸ್ತುಗಳನ್ನು ಪ್ರದರ್ಶಿಸುತ್ತಿರುವ ಪೊಲೀಸರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಇದ್ದಾರೆ.
ಗಾಂಜಾ ಆರೋಪಿಗಳಿಂದ ವಶಕ್ಕೆ ಪಡೆದಿರುವ ವಸ್ತುಗಳನ್ನು ಪ್ರದರ್ಶಿಸುತ್ತಿರುವ ಪೊಲೀಸರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಇದ್ದಾರೆ.   

ತುಮಕೂರು: ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಕರಕಲ್ಲುಘಟ್ಟ ಗ್ರಾಮದಲ್ಲಿ ಈರಮಲ್ಲಮ್ಮ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸಿದ್ದಹನುಮಯ್ಯ ಎಂಬುವವರನ್ನು 25 ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ.

ಸಿದ್ದಹನುಮಯ್ಯ 1994ರಲ್ಲಿ ಜಮೀನಿನಲ್ಲಿ ಕೆಲಸ ಮಾಡುತಿದ್ದ ಈರಮಲ್ಲಮ್ಮ ಅವರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಊರು ಬಿಟ್ಟಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚೆಗೆ ನಡೆದ ಮಾಸಿಕ ಅಪರಾಧ ಸಭೆಯಲ್ಲಿ ಆರೋಪಿಯನ್ನು ಶೀಘ್ರವಾಗಿ ಪತ್ತೆ ಮಾಡಲು ಸೂಚಿಸಲಾಗಿತ್ತು. ಕೊರಟಗೆರೆ ಸಬ್‌ ಇನ್‌ಸ್ಪೆಕ್ಟರ್ ಬಿ.ಸಿ.ಮಂಜುನಾಥ್ ಹಾಗೂ ಸಿಬ್ಬಂದಿ ವೆಂಕಟೇಶ್, ದೊಡ್ಡಲಿಂಗಯ್ಯ ನೇತೃತ್ವದ ತಂಡ ರಚಿಸಲಾಗಿತ್ತು. ಈ ತಂಡವು ನೆಲಮಂಗಲ ಬಳಿಯ ಬೆಟ್ಟಹಳ್ಳಿಯಲ್ಲಿ ಆರೋಪಿಯು ಕೂಲಿಕೆಲಸ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅಕ್ರಮ ಮದ್ಯ ಮಾರಾಟ: ಕಳೆದ 1 ವಾರದಲ್ಲಿ ಜಿಲ್ಲೆಯ 52 ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಉಪವಿಭಾಗ 7, ಮಧುಗಿರಿ 11, ಶಿರಾ 11, ತಿಪಟೂರು 15, ಕುಣಿಗಲ್ ತಾಲ್ಲೂಕಿನಲ್ಲಿ 5 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತುಮಕೂರಿನಲ್ಲಿ 35 ಪುಡಿರೌಡಿಗಳನ್ನು ವಶಕ್ಕೆ ಪಡೆದಿದ್ದು, ಇವರ ಕಿಂಗ್‌ಪಿನ್‌ಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಧುಗಿರಿ ಡಿವೈಎಸ್‌ಪಿ ಪ್ರವೀಣ್, ಕೊರಟಗೆರೆ ಸಿಪಿಐ ನಧಾಪ್, ಪಿಎಸ್‌ಐ ಬಿ.ಸಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.