ಪೊಲೀಸ್
(ಸಾಂದರ್ಭಿಕ ಚಿತ್ರ)
ತುಮಕೂರು: ಪ್ರತಿಷ್ಠಿತ ಕಂಪನಿಗಳ ಷೇರುಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ನಗರದ ಎಸ್.ಎಸ್.ಪುರಂನ ನಿವೃತ್ತ ಸಾಫ್ಟ್ವೇರ್ ಮ್ಯಾನೇಜರ್ ಶ್ರೀನಿವಾಸು ಬಚ್ಚು ಎಂಬುವರಿಗೆ ₹3.83 ಕೋಟಿ ವಂಚಿಸಲಾಗಿದೆ.
‘ಸೈಬರ್ ಆರೋಪಿಗಳು ದಿವ್ಯಾ ವರ್ಮಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡರು. ನಾನು ‘ಟಪಾರಿಯ ಟೂಲ್ಸ್’ ಕಂಪನಿಗೆ ಸಂಬಂಧಿಸಿದ ಷೇರು ಖರೀದಿಗೆ ಆಸಕ್ತಿ ತೋರಿದೆ. ಜಿನ್ ಸೇಥ್ ಎಂಬುವರು ಪ್ರತಿ ದಿನ ಮೆಸೇಜ್ ಮಾಡಿ ಹೂಡಿಕೆಯ ಆಮಿಷ ಒಡ್ಡಿದ್ದರು. ಅದರಂತೆ ಹಂತ ಹಂತವಾಗಿ ₹3,83,89,800 ವರ್ಗಾಯಿಸಿದ್ದೆ’ ಎಂದು ಶ್ರೀನಿವಾಸು ಸೈಬರ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಮೊದಲಿಗೆ ವಾಟ್ಸ್ ಆ್ಯಪ್ನಲ್ಲಿ ಕೆಲವು ಲಿಂಕ್ ಕಳುಹಿಸಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದರು. ನಂತರ ಒಂದು ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಿದರು. ಸದರಿ ಗ್ರೂಪ್ನಲ್ಲಿ ಷೇರು ಮಾರುಕಟ್ಟೆ ಕುರಿತು ತಿಳಿಸುತ್ತಿದ್ದರು. ಲಾಭಾಂಶ ಬಂದಿರುವ ಬಗ್ಗೆ ಕೆಲವರು ಮೆಸೇಜ್ ಹಾಕುತ್ತಿದ್ದರು’ ಎಂದು ತಿಳಿಸಿದ್ದಾರೆ.
‘ಪ್ರತಿಷ್ಠಿತ ಕಂಪನಿಗಳ ಷೇರು ಖರೀದಿಸಲು ಹಣವಿರಲಿಲ್ಲ. ಈ ಮೊದಲೇ ಇದ್ದ ವಿವಿಧ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಿ, ದಿವ್ಯಾ ವರ್ಮಾ ನೀಡಿದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದೆ. ಈ ಆ್ಯಪ್ನಲ್ಲಿ ಷೇರುಗಳ ಮೊತ್ತ ತೋರಿಸುತ್ತಿದ್ದು, ವಿತ್ ಡ್ರಾ ಮಾಡಿಕೊಳ್ಳಲು ಮುಂದಾದಾಗ ವಂಚನೆಗೆ ಒಳಗಾಗಿರುವುದು ತಿಳಿಯಿತು. ಆರೋಪಿಗಳನ್ನು ಪತ್ತೆ ಹಚ್ಚಿ, ಹಣ ವಾಪಸ್ ಕೊಡಿಸುವಂತೆ’ ಶ್ರೀನಿವಾಸು ಬಚ್ಚು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.