
ಚಿಕ್ಕನಾಯಕನಹಳ್ಳಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸುಬಾಗಿ ರೂಢಿಸಿಕೊಂಡರೆ ಮಾತ್ರ ಲಾಭಗಳಿಸಲು ಸಾಧ್ಯ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಉಪ್ಪಾರಳ್ಳಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಜಮೀನು ಇದ್ದವನು ಮಾತ್ರ ಲಾಭದಾಯಕ ಸ್ಥಿತಿಯಲ್ಲಿರುತ್ತಾನೆ ಎನ್ನುವುದು ತಪ್ಪು ಕಲ್ಪನೆ. ಕಡಿಮೆ ಜಮೀನಿರುವ ರೈತರು ಕುರಿ, ಕೋಳಿ ಸಾಕಣೆ, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆಯಂತಹ ಉಪಕಸುಬಗಳ ಮೂಲಕ ಅಲ್ಪಾವಧಿಯಲ್ಲಿ ಉತ್ತಮ ಆದಾಯ ಕಾಣಬಹುದು. ಹಸು ಸಾಕಾಣೆ ಗ್ರಾಮೀಣ ಮಹಿಳೆಯರ ಕೈಹಿಡಿದಿದ್ದು, ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಇರಬಹುದು. ಆದರೆ ಹಾಲಿನ ಡೇರಿಯಲ್ಲಿ ಉತ್ಪಾದಕರಿಂದ ಗ್ರಾಹಕರವರೆಗೆ ಯಾವುದೇ ಜಾತಿ ಭೇದವಿಲ್ಲ ಎಂದರು.
ತುಮುಲ್ ನಿರ್ದೇಶಕ ಬಿ.ಎನ್. ಶಿವಪ್ರಕಾಶ್ ಮಾತನಾಡಿ, ತಾಲ್ಲೂಕಿನಿಂದ ಪ್ರತಿದಿನ ಒಂದು ಲಕ್ಷ ಲೀಟರ್ ಗುಣಮಟ್ಟದ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಒಕ್ಕೂಟವು ಉತ್ಪಾದಕರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಸೌಕರ್ಯ ನೀಡುತ್ತಿದೆ. ದುರಾಸೆಗೆ ಬಿದ್ದು ಹಾಲಿನ ಗುಣಮಟ್ಟವನ್ನು ಯಾರೂ ಹಾಳು ಮಾಡಬಾರದು ಎಂದು ಮನವಿ ಮಾಡಿದರು.
ಮತ್ತಿಘಟ್ಟ ವಿಎಸ್ಎಸ್ಎನ್ ನಿರ್ದೇಶಕ ಎಳ್ಳೆನಳ್ಳಿ ನಂಜೇಗೌಡ, ಅಧ್ಯಕ್ಷ ಹರೀಶ್, ಭಾನುಮತಿ, ಉಮೇಶ್, ನಿರಂಜನ್, ರುದ್ರೇಶ್, ದ್ರಾಕ್ಷಾಯಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.