ಮಧುಗಿರಿ: ಕೊಡಿಗೇನಹಳ್ಳಿ ಹೋಬಳಿ ಪೋಲೇನಹಳ್ಳಿಯಲ್ಲಿ ದಲಿತ ವ್ಯಕ್ತಿಯ ಕೊಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪಟ್ಟಣದ ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪೋಲೇನಹಳ್ಳಿಯಲ್ಲಿ ಮಾದಿಗ ಸಮುದಾಯದ ಆನಂದ್ ಎಂಬುವವರ ಮೇಲೆ ಗುರುವಾರ ವಾಹನ ಹತ್ತಿಸಿ ಕೊಲೆ ಮಾಡಲಾಗಿತ್ತು. ಈವರೆಗೆ ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ರಾಮಕೃಷ್ಣಪ್ಪ ಅವರ ಹೆಸರು ಸೇರಿಸಿ ಕೂಡಲೇ ಬಂಧಿಸಬೇಕು. ಬೇರೆ ತನಿಖಾಧಿಕಾರಿಯನ್ನು ನೇಮಿಸಬೇಕು. ಕಾನೂನಾತ್ಮಕವಾಗಿ ದಲಿತ ಸಂಘಟನೆ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಶವಸಂಸ್ಕಾರ ನಡೆಸಬೇಕು. ಇಲ್ಲದಿದ್ದಲ್ಲಿ ಸಂಘಟನೆ ವತಿಯಿಂದ ಹೋರಾಟದ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ದಲಿತನೊಬ್ಬನ ಕೊಲೆಗೆ ಸಂಬಂಧಿಸಿದಂತೆ ಯಾರೇ ಅಪರಾಧಿಗಳಾದರೂ ಅವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತಪಟ್ಟಿರುವ ಯುವಕನ ಕುಟುಂಬಕ್ಕೆ ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ನೀಡಬೇಕು. ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಕೆಲವರ ಹೆಸರು ಬಿಟ್ಟು ಹೋಗಿದ್ದು, ಅವರನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ.ಸದಸ್ಯ ಎಚ್.ಡಿ.ಕೃಷ್ಣಪ್ಪ ಹಾಗೂ ದೊಡ್ಡೇರಿ ಕಣಿಮಯ್ಯ, ಭರತ್, ವಕೀಲ ನರಸಿಂಹಮೂರ್ತಿ, ತೊಂಡೋಟಿ ರಾಮಾಂಜಿ, ಎಂ.ವೈ.ಶಿವಕುಮಾರ್, ನರಸೀಯಪ್ಪ, ಕದರಪ್ಪ, ಟೈಗರ್ ನಾಗರಾಜು, ರಾಧಕೃಷ್ಣ, ಸಿದ್ದಾಪುರ ರಂಗನಾಥ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹನುಮಂತರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.