ADVERTISEMENT

ಸಾಲ ವಸೂಲಿ: ಒತ್ತಡ ಹೇರದಂತೆ ತಹಶೀಲ್ದಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮೇ 2024, 13:29 IST
Last Updated 9 ಮೇ 2024, 13:29 IST
ಗುಬ್ಬಿ ತಾಲ್ಲೂಕು ಆಡಳಿತ ಸೌಧದಲ್ಲಿ ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ತಹಶೀಲ್ದಾರ್ ಆರತಿ ಬಿ.
ಗುಬ್ಬಿ ತಾಲ್ಲೂಕು ಆಡಳಿತ ಸೌಧದಲ್ಲಿ ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ತಹಶೀಲ್ದಾರ್ ಆರತಿ ಬಿ.    

ಗುಬ್ಬಿ: ಸರ್ಕಾರವು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿದ್ದು, ಖಾಸಗಿ ಹಣಕಾಸು ಸಂಸ್ಥೆಗಳು ರೈತರಿಂದ ಸಾಲ ವಸೂಲಿಗೆ ಒತ್ತಡ ಹೇರಬಾರದು ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.

ಖಾಸಗಿ ಹಣಕಾಸು ಸಂಸ್ಥೆಯೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದರು.

ಸಾಲ ಮರುಪಾವತಿಸುವಂತೆ ಹಣಕಾಸು ಸಂಸ್ಥೆಗಳು ರೈತರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ, ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ಮುಂದಿನ ಆದೇಶದವರೆಗೆ ಹಣಕಾಸು ಸಂಸ್ಥೆಗಳು ಸಾಲವಸೂಲಿಗೆ ಮುಂದಾಗಬಾರದು ಎಂದು ಸೂಚಿಸಿದರು.

ADVERTISEMENT

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕೆರೆಗಳಲ್ಲಿ ನೀರು ಇಲ್ಲದಿರುವುದನ್ನೇ ನೆಪವಾಗಿಸಿಕೊಂಡಿರುವ ಹಲವರು ಕಾನೂನುಬಾಹಿರವಾಗಿ ಕೆರೆಗಳಲ್ಲಿ ಆಳವಾದ ಗುಂಡಿ ತೆಗೆದು ಮಣ್ಣನ್ನು ತೆಗೆಯುತ್ತಿರುವುದು ಕಂಡು ಬರುತ್ತಿದೆ. ಪರವಾನಗಿ ಇಲ್ಲದೆ ಮಣ್ಣು ತಗೆದರೆ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಹೇಮಾವತಿ ಅಧಿಕಾರಿಗಳ ಸಹಯೋಗದಲ್ಲಿ ತಂಡವನ್ನು ರಚಿಸಲಾಗಿದೆ. ಅಕ್ರಮಗಳು ಕಂಡುಬಂದಲ್ಲಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಸಾರ್ವಜನಿಕರು ತಾಲ್ಲೂಕು ಕಚೇರಿಯ ದೂರವಾಣಿ ಸಂಖ್ಯೆ 08131- 222234, ತಾಲ್ಲೂಕು ಪಂಚಾಯಿತಿ ದೂರವಾಣಿ 08131-222784, ಹೇಮಾವತಿ ಎಂಜಿನಿಯರ್ ಚೇಳೂರು- 6366174716, ಕಡಬ-8660633430, ನಿಟ್ಟೂರು-9449117380 ಇದರ ಜೊತೆಗೆ 112 ದೂರವಾಣಿ ಸಂಖ್ಯೆಗೆ ಕರೆಮಾಡಿ ದೂರು ನೀಡಬಹುದು ಎಂದು ತಿಳಿಸಿದರು.

ಇಒ ಪರಮೇಶ್ ಕುಮಾರ್, ಶಿರಸ್ತೇದಾರ್ ಶ್ರೀರಂಗ, ಹೇಮಾವತಿ ಎಇಇ ಗಿರೀಶ್, ಮಹೇಶ್, ಜಯರಾಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ರಾಜೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.