ಗುಬ್ಬಿ: ತಾಲ್ಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದ ದೀಪಾವಳಿಗೆ ಈ ಬಾರಿ ಬರದ ಕರಿನೆರಳು ಆವರಿಸಿದೆ.
ಪಟ್ಟಣಗಳಲ್ಲಿ ನರಕಚತುರ್ದಶಿಯಂದೇ ದೀಪಾವಳಿಗೆ ಚಾಲನೆ ದೊರೆತರೆ, ಗ್ರಾಮೀಣ ಭಾಗದಲ್ಲಿ ಬಲಿಪಾಡ್ಯಮಿಯಂದು ದೀಪಾವಳಿ ಆಚರಿಸುವುದು ರೂಢಿಯಲ್ಲಿದೆ.
ಗ್ರಾಮೀಣ ಭಾಗಗಳಲ್ಲಿ ಸಗಣಿಯಿಂದ ಉಂಡೆಮಾಡಿ ಚರಕಪ್ಪ (ತಿಪ್ಪಮ್ಮ)ನನ್ನು ಹಾಕಿ ಹುಚ್ಚಳ್ಳು ಹೂವು ಹಾಗೂ ಎಲ್ಲ ಧಾನ್ಯಗಳ ತೆನೆಗಳನ್ನು ಸಗಣಿ ಉಂಡೆಗೆ ಚುಚ್ಚಿ ಅಲಂಕರಿಸುವ ಜೊತೆಗೆ ಹುಚ್ಚೆಳ್ಳು ಹೂವುಗಳನ್ನು ಮನೆಯ ಅಂಗಳದಲ್ಲಿ ಚೆಲ್ಲಿ ಸಡಗರದಿಂದ ಪೂಜೆ ಮಾಡುತ್ತಾರೆ.
ಸದ್ಯ ಬರಗಾಲ ಇರುವುದರಿಂದ ಅಲ್ಪ ಸ್ವಲ್ಪ ರಾಗಿ ಬೆಳೆ ಹೊರತುಪಡಿಸಿ ಯಾವುದೇ ಬೆಳೆ ಇಲ್ಲದಿರುವುದರಿಂದ ಗ್ರಾಮೀಣ ಭಾಗದಲ್ಲಿ ಹಬ್ಬದ ಆಚರಣೆಯ ಸಡಗರ ಅಷ್ಟಾಗಿ ಕಂಡುಬರಲಿಲ್ಲ.
ದೀಪಾವಳಿಯಲ್ಲಿ ವಿಶೇಷವಾಗಿ ಬಳಸುತ್ತಿದ್ದ ಹುಚ್ಚೆಳ್ಳು ಹೂವು ಇಲ್ಲವಾಗಿದ್ದು, ಬೇರೆ ಹೂವುಗಳನ್ನೇ ಬಳಸುವಂತಾಗಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿರುವುದರಿಂದ ಪಟಾಕಿ ಬೆಲೆಯೂ ಹೆಚ್ಚಿದ್ದು, ಪಟಾಕಿ ಸಿಡಿಸುವುದು ಕಡಿಮೆಯಾಗಿದೆ.
ಪಟ್ಟಣದಲ್ಲಿ ಅಲ್ಪಸ್ವಲ್ಪ ಆಚರಣೆಯ ಸಂಭ್ರಮ ಕಂಡುಬಂದರೆ, ಗ್ರಾಮೀಣ ಭಾಗದಲ್ಲಿ ಬರದ ಛಾಯೆಯಿಂದಾಗಿ ಹಬ್ಬದ ಆಚರಣೆಯ ಮೆರೆಗು ಅಷ್ಟಾಗಿ ಕಾಣುತ್ತಿಲ್ಲ.
ಮಳೆ ಇಲ್ಲದಿರುವುದರಿಂದ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ರಾಸುಗಳ ಮೇವಿನದ್ದೇ ಚಿಂತೆಯಾಗಿದೆ. ರಾಸುಗಳು ಸುಭಿಕ್ಷವಾಗಿದ್ದಲ್ಲಿ ರೈತರು ಸಂತೋಷದಿಂದ ಹಬ್ಬ ಆಚರಿಸಲು ಸಾಧ್ಯ ಎನ್ನುತ್ತಾರೆ ರೈತ ಕೆಂಪರಾಜು.
ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಮಳೆ ಬೆಳೆ ಇಲ್ಲದಿರುವುದರಿಂದ ಸಂಪ್ರದಾಯವನ್ನು ಕಾಪಾಡಿಕೊಳ್ಳಲಷ್ಟೇ ಹಬ್ಬವನ್ನು ಆಚರಿಸುವಂತಾಗಿದೆ. ಈ ಮೊದಲಿನ ಉತ್ಸಾಹ ಕಾಣಿಸುತ್ತಿಲ್ಲಮಹಾಲಿಂಗಯ್ಯ, ಗುಬ್ಬಿ
ದೀಪಾವಳಿ ಬಂದರೆ ಹೊಸ ಬಟ್ಟೆ ಪಟಾಕಿ ಸಿಡಿಸುವ ಸಂಭ್ರಮವಿತ್ತು. ಆದರೆ ಈ ಬಾರಿ ಹಬ್ಬದ ಆಚರಣೆಯಲ್ಲಿ ಯಾವುದೇ ಉತ್ಸಾಹ ಇಲ್ಲವಾಗಿದೆ.ಯುಕ್ತಿ, ವಿದ್ಯಾರ್ಥಿನಿ
ಈ ಮೊದಲೆಲ್ಲ ದೀಪಾವಳಿಯಲ್ಲಿ ಧಾನ್ಯದ ತೆನೆಗಳನ್ನೇ ಹುಡುಕಿ ತಂದು ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಯಾವುದೇ ತೆನೆ ಸಿಗದೆ ಕಾಟಾಚಾರಕ್ಕೆ ಹಬ್ಬ ಆಚರಿಸುವಂತಾಗಿದೆ.ಲಕ್ಷ್ಮಮ್ಮ, ಗೃಹಿಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.